ಮುಂಬೈ: ಮುಂಬೈನಲ್ಲಿ ನಡೆದ ಮೊಹರಂ ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ಸಾವಿರಾರು ಭಕ್ತರಿಗೆ ವಿಷಪ್ರಯೋಗ ನಡೆಸುವ ಭೀಕರ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.ಹೌದು. ಮೊಹರಂ ಮೆರವಣಿಗೆಯಲ್ಲಿ ಸಾವಿರಾರು ಭಕ್ತರಿಗೆ ವಿಷಪ್ರಯೋಗ ನಡೆಸುವ ಸಂಚು ರೂಪಿಸಿದ್ದಾನೆ ಎನ್ನಲಾದ ಆರೋಪಿ ಫಯ್ಯಾಜ್ ಪ್ರೇಂಜಿ (39) ವಿರುದ್ಧದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.
ಡೊಂಗ್ರಿಯ ಹೋಟೆಲ್ನಲ್ಲಿ ತಂಗಿದ್ದ ಆರೋಪಿ ಫಯ್ಯಾಜ್ ಪ್ರೇಂಜಿ 30 ಸಾವಿರ ವಿಷಭರಿತ ಕ್ಯಾಪ್ಸುಲ್ಗಳನ್ನು ತಯಾರಿಸಿ, ಅವುಗಳನ್ನು ಔಷಧಿ ಹೆಸರಿನಲ್ಲಿ ಹಂಚಿ ಸುಮಾರು 15 ಸಾವಿರ ಮಂದಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ 14,900 ವಿಷಭರಿತ ಕ್ಯಾಪ್ಸುಲ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಮುಂಬೈನ ಡೊಂಗ್ರಿಯಲ್ಲಿರುವ ಬಜೆಟ್ ಹೋಟೆಲ್ನಲ್ಲಿ ಸುಮಾರು ಎರಡು ವಾರಗಳ ಕಾಲ ತಂಗಿದ್ದ ಆತ, 30,000 ಖಾಲಿ ಕ್ಯಾಪ್ಸುಲ್ಗಳು ಹಾಗೂ ಸುಮಾರು 50 ಕೆಜಿ ಜಿಂಕ್ ಫಾಸ್ಫೈಡ್ (ಇಲಿ ವಿಷ) ಸಂಗ್ರಹಿಸಿ, ಹೋಟೆಲ್ ಕೊಠಡಿಯಲ್ಲೇ ವಿಷಭರಿತ ಕ್ಯಾಪ್ಸುಲ್ಗಳನ್ನು ತಯಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಈ ವಿಷಭರಿತ ಕ್ಯಾಪ್ಸುಲ್ಗಳನ್ನು ವಿಟಮಿನ್ ಅಥವಾ ನೋವು ನಿವಾರಕ ಔಷಧಿ ಎಂದು ಹೇಳಿ ಮುಹರಂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಹಂಚಲು ಯತ್ನಿಸಿದ್ದ. ಹೋಟೆಲ್ನಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 14,900 ವಿಷಭರಿತ ಕ್ಯಾಪ್ಸುಲ್ಗಳು ಪತ್ತೆಯಾಗಿದ್ದು, ಒಟ್ಟು 30,000 ಕ್ಯಾಪ್ಸುಲ್ಗಳನ್ನು ತಯಾರಿಸುವ ಉದ್ದೇಶ ಹೊಂದಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
15,000 ಜನರನ್ನು ಕೊಲ್ಲುವ ಉದ್ದೇಶ
ವಿಚಾರಣೆ ವೇಳೆ ಆರೋಪಿ “ಕನಿಷ್ಠ 15,000 ಜನರನ್ನು ಕೊಲ್ಲುವ ಉದ್ದೇಶ ಹೊಂದಿದ್ದೆ” ಎಂದು ಹೇಳಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ. ಉಳಿದ ವಿಷಕಾರಿ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವರು ನೋವು ನಿವಾರಕ ಮಾತ್ರೆ ಎಂದು ನಂಬಿ ಕ್ಯಾಪ್ಸುಲ್ ಸೇವಿಸಿದ ಬಳಿಕ ವಾಂತಿ, ವಾಕರಿಕೆ ಮತ್ತು ಹೊಟ್ಟೆನೋವಿನಿಂದ ಬಳಲಿದ ನಂತರ. ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಕ್ಯಾಪ್ಸುಲ್ಗಳ ಮೂಲವನ್ನು ಪತ್ತೆಹಚ್ಚಿ ಫಯ್ಯಾಜ್ ಪ್ರೇಂಜಿಯನ್ನು ಬಂಧಿಸಿದ್ದು, ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ಇದೀಗ ಇನ್ನಷ್ಟು ವಿಸ್ತರಿಸಿದ್ದು, ಈ ಹಿಂದೆ ಪುಣೆಯಲ್ಲಿ ಪೇಂಟ್ ತಯಾರಿಕಾ ವ್ಯವಹಾರ ನಡೆಸುತ್ತಿದ್ದ ಫಯ್ಯಾಜ್ ಸುಮಾರು ಎರಡು ವರ್ಷಗಳ ಹಿಂದೆ ಮುಂಬೈಗೆ ಸ್ಥಳಾಂತರಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಆತನ ಮೊಬೈಲ್ನಲ್ಲಿ ಇರಾನ್ ಹಾಗೂ ಇರಾಕ್ಗೆ ಸಂಬಂಧಿಸಿದ ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದು, ಅವುಗಳಿಗೆ ಪ್ರಕರಣದೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS), ಮುಂಬೈ ಪೊಲೀಸರು ಹಾಗೂ ಗುಪ್ತಚರ ಸಂಸ್ಥೆಗಳು ಪರಿಶೀಲಿಸುತ್ತಿವೆ. ಇದುವರೆಗೆ ಯಾವುದೇ ವಿದೇಶಿ ಸಂಪರ್ಕ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇದೇ ವೇಳೆ, ಫಯ್ಯಾಜ್ ಅವರ ಕುಟುಂಬ ಸದಸ್ಯರ ನಿವಾಸಗಳಿಗೂ ATS ಹಾಗೂ ಮುಂಬೈ ಪೊಲೀಸ್ ತಂಡಗಳು ಭೇಟಿ ನೀಡಿವೆ. ಕುಟುಂಬದವರು ಹಲವು ದಿನಗಳಿಂದ ಆತನೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಪತ್ನಿ ದೂರವಾದ ಬಳಿಕ ಫಯ್ಯಾಜ್ ಖಿನ್ನತೆಗೆ
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಫಯ್ಯಾಜ್ ಖಿನ್ನತೆಗೆ ಒಳಗಾಗಿದ್ದಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ವೈಯಕ್ತಿಕ ಜೀವನದ ಘಟನೆಗಳು ಈ ಕೃತ್ಯಕ್ಕೆ ಕಾರಣವಾಗಿದೆಯೇ ಎಂಬುದನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯ ವಿರುದ್ಧ ಹತ್ಯೆ ಯತ್ನ, ವಿಷಪ್ರಯೋಗ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಹಲವು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಆತ ಒಬ್ಬನೇ ಈ ಸಂಚು ರೂಪಿಸಿದ್ದಾನೆಯೇ ಅಥವಾ ಇತರರ ಸಹಾಯವೂ ಇದೆಯೇ ಎಂಬುದನ್ನು ಪತ್ತೆಹಚ್ಚಲು ಹಣಕಾಸು ವ್ಯವಹಾರಗಳು, ಡಿಜಿಟಲ್ ಸಾಧನಗಳು, ಆನ್ಲೈನ್ ಖರೀದಿಗಳು, ಪ್ರಯಾಣದ ವಿವರಗಳು ಹಾಗೂ ಸಂಪರ್ಕಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.