ನವದೆಹಲಿ: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಬಿ.ಟೆಕ್ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಸೈನ್ಸ್ ಕೋರ್ಸ್ಗೆ ಎಐಸಿಟಿಇ (AICTE) ಅನುಮೋದನೆ ಪಡೆದಿದೆ. ಇದರೊಂದಿಗೆ, ಎಐಸಿಟಿಇ ಮಾನ್ಯತೆ ಪಡೆದ ಬಿ.ಟೆಕ್ ಎಐ ಕೋರ್ಸ್ ಆರಂಭಿಸಿದ ದೇಶದ ಮೊದಲ ಸಂಸ್ಕೃತ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2026-27ನೇ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್ಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ, ಈ ಕೋರ್ಸ್ ಮೂಲಕ ಎಐ, ಮಷಿನ್ ಲರ್ನಿಂಗ್, ಡೇಟಾ ಸೈನ್ಸ್ ಮೊದಲಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಭಾರತದ ಸಮೃದ್ಧ ಭಾಷಾ ಪರಂಪರೆ ಹಾಗೂ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ. ಇದರಿಂದ ಭಾರತೀಯ ಭಾಷೆಗಳಿಗಾಗಿ ಹೊಸ ಎಐ ಆವಿಷ್ಕಾರಗಳು, ಪ್ರಾಚೀನ ತಾಳೆಓಲೆಗಳು ಹಾಗೂ ಗ್ರಂಥಗಳ ಡಿಜಿಟಲೀಕರಣ ಮತ್ತು ಅಂತರಶಾಖಾ ಸಂಶೋಧನೆಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಯ ಬಹುಶಾಖಾ ಶಿಕ್ಷಣದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮಾತನಾಡಿ, “ದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಎಐ ಮತ್ತು ಡೇಟಾ ಸೈನ್ಸ್ನಂತಹ ಆಧುನಿಕ ಕ್ಷೇತ್ರದಲ್ಲಿ ಬಿ.ಟೆಕ್ ಕೋರ್ಸ್ ಆರಂಭಿಸಿರುವುದು ದೂರದೃಷ್ಟಿಯ ಹೆಜ್ಜೆಯಾಗಿದೆ. ಇದು ಭಾರತದ ಪ್ರಾಚೀನ ಜ್ಞಾನ ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನಗಳ ನಡುವಿನ ಸೇತುವೆಯಾಗಲಿದೆ. ಭಾರತೀಯ ಭಾಷೆಗಳಿಗಾಗಿ ಹೊಸ ಎಐ ಪರಿಹಾರಗಳ ಅಭಿವೃದ್ಧಿ ಹಾಗೂ ಪ್ರಾಚೀನ ಗ್ರಂಥಗಳು, ತಾಳೆಓಲೆಗಳ ಸಂರಕ್ಷಣೆಗೆ ಇದು ಹೊಸ ದಿಕ್ಕು ತೋರಲಿದೆ” ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಇತ್ತೀಚಿನ ‘ಮನ ಕಿ ಬಾತ್’ ಕಾರ್ಯಕ್ರಮದಲ್ಲೂ ಈ ಉಪಕ್ರಮವನ್ನು ಪ್ರಸ್ತಾಪಿಸಿ, ಭಾರತದ ಪ್ರಾಚೀನ ಜ್ಞಾನ ಸಂಪತ್ತನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ದೂರದೃಷ್ಟಿಯ ಕ್ರಮ ಎಂದು ಶ್ಲಾಘಿಸಿದರು. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅವರು ಅಭಿನಂದನೆಗಳನ್ನೂ ಸಲ್ಲಿಸಿದರು.
ಇದೇ ವೇಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಪ್ರತಿಕ್ರಿಯಿಸಿ, ತಂತ್ರಜ್ಞಾನವನ್ನು ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮಹತ್ವದ ಹೆಜ್ಜೆಯಿದು. ಈ ಯೋಜನೆಯಿಂದ ಪ್ರಾಚೀನ ಗ್ರಂಥಗಳು ಮತ್ತು ತಾಳೆಓಲೆಗಳ ಡಿಜಿಟಲ್ ಸಂರಕ್ಷಣೆಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಹೇಳಿದ್ದಾರೆ.