ಪುಣೆ ಜಿಲ್ಲೆಯ ನಾಸರಾಪುರ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ 65 ವರ್ಷದ ಆರೋಪಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಅಪರಾಧ ನಡೆದ ಕೇವಲ 60 ದಿನಗಳಲ್ಲೇ ಪ್ರಕರಣದ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟವಾಗಿದೆ.
ಈ ದುರ್ಘಟನೆ 2026ರ ಮೇ 1ರಂದು ನಡೆದಿತ್ತು. ತನ್ನ ತಾಯಿಯ ಮನೆಗೆ ಬಂದಿದ್ದ 3 ವರ್ಷದ ಬಾಲಕಿಯನ್ನು ಆರೋಪಿ ಸಮೀಪದ ಜಾನುವಾರು ಕೊಟ್ಟಿಗೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿ ಕಾಣೆಯಾಗುತ್ತಿದ್ದಂತೆ ಕುಟುಂಬಸ್ಥರು ಹುಡುಕಾಟ ನಡೆಸಿದ್ದು, ಬಳಿಕ ಆಕೆಯ ಮೃತದೇಹ ಕೊಟ್ಟಿಗೆಯಲ್ಲಿ ಪತ್ತೆಯಾಗಿತ್ತು.ಘಟನೆ ಬಳಿಕ ನಾಸರಾಪುರ ಸೇರಿದಂತೆ ಪುಣೆಯ ವಿವಿಧ ಭಾಗಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸ್ಥಳೀಯರು ರಸ್ತೆ ತಡೆ ನಡೆಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ಪೊಲೀಸರು ಘಟನೆ ನಡೆದ ದಿನವೇ ಆರೋಪಿಯನ್ನು ಬಂಧಿಸಿದ್ದರು. 16 ದಿನಗಳಲ್ಲೇ 1,200 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಮೇ 28ರಂದು ಆರೋಪ ಚಾರ್ಜ್ ಫ್ರೇಮ್ ಮಾಡಲಾಗಿದ್ದು, ಜೂನ್ 20ರಂದು ಅಂತಿಮ ವಾದಗಳು ಪೂರ್ಣಗೊಂಡಿದ್ದವು. ಬಳಿಕ ಜೂನ್ 25ರಂದು ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿತು.
ಪ್ರಾಸಿಕ್ಯೂಷನ್ ಮಂಡಿಸಿದ್ದ “ಕೊನೆಯದಾಗಿ ಬಾಲಕಿಯೊಂದಿಗೆ ಆರೋಪಿ ಕಾಣಿಸಿಕೊಂಡಿದ್ದ” (Last Seen Together) ಎಂಬ ಸಿದ್ಧಾಂತ ಹಾಗೂ ಇತರೆ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಸಮರ್ಪಕವೆಂದು ಪರಿಗಣಿಸಿತು.ತೀರ್ಪಿನಲ್ಲಿ ನ್ಯಾಯಾಲಯ, “ಆರೋಪಿ ಸಮಾಜಕ್ಕೆ ಅಪಾಯಕಾರಿಯಾಗಿದ್ದು, ಆತನಲ್ಲಿ ಪಶ್ಚಾತ್ತಾಪ ಅಥವಾ ಸುಧಾರಣೆಯ ಯಾವುದೇ ಲಕ್ಷಣಗಳಿಲ್ಲ. ಸುಧಾರಣೆಯ ಅವಕಾಶವನ್ನೇ ಮೀರಿದ್ದಾನೆ” ಎಂದು ಕಠಿಣವಾಗಿ ಅಭಿಪ್ರಾಯಪಟ್ಟಿದೆ.ಆರೋಪಿ ಪರ ವಕೀಲ ಹಿಮ್ಮತ್ರಾವ್ ಸೂರ್ಯವಂಶಿ, “ಲಾಸ್ಟ್ ಸೀನ್ ಟುಗೆದರ್” ಸಿದ್ಧಾಂತವನ್ನು ದೃಢಪಡಿಸುವ ಸ್ಪಷ್ಟ ಸಾಕ್ಷ್ಯಗಳಿಲ್ಲ. ಆರೋಪಿಯ ವಯಸ್ಸು ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಪರಿಗಣಿಸಿ ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದರು. ಇನ್ನೊಂದೆಡೆ, ಸರ್ಕಾರಿ ಪರ ವಕೀಲ ಅಜಯ್ ಮಿಸಾರ್, ಬಾಲಕಿಯ ವಯಸ್ಸು ಹಾಗೂ ಅಪರಾಧದ ಭೀಕರ ಸ್ವರೂಪವನ್ನು ಉಲ್ಲೇಖಿಸಿ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದರು.