ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆಯ ದುರುಪಯೋಗ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ಪ್ರಕರಣ ಬಹಿರಂಗವಾಗುವ ಸುಮಾರು ಮೂರು ತಿಂಗಳ ಮುಂಚೆಯೇ ದೇಣಿಗೆ ಹಣ ಎಣಿಸುತ್ತಿದ್ದ ಸಿಬ್ಬಂದಿಯನ್ನು ಬದಲಾಯಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಿಫಾರಸು ಮಾಡಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ವರದಿಗಳ ಪ್ರಕಾರ, ದೇಣಿಗೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಶಂಕೆ ವ್ಯಕ್ತಪಡಿಸಿದ್ದ ಎಸ್ಬಿಐ, ಹೊರಗುತ್ತಿಗೆ ಸಿಬ್ಬಂದಿಯನ್ನು ತೆರವುಗೊಳಿಸುವಂತೆ ಸೂಚಿಸಿತ್ತು. ಆದರೆ, ರಾಮ ಮಂದಿರ ಟ್ರಸ್ಟ್ನ ಕೆಲ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಿಬ್ಬಂದಿಯನ್ನು ತೆಗೆದುಹಾಕುವುದನ್ನು ತಡೆದಿದ್ದಾರೆ ಎನ್ನಲಾಗಿದೆ.
ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು
ತನಿಖಾಧಿಕಾರಿಗಳ ಪ್ರಕಾರ, ರಹಸ್ಯವಾಗಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಕೆಲ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯವನ್ನು ಮರೆಮಾಡುತ್ತಿದ್ದರೆ, ಮತ್ತೊಬ್ಬ ವ್ಯಕ್ತಿ ನೋಟಿನ ಕಟ್ಟುಗಳಿಂದ ಹಣ ತೆಗೆದು ತನ್ನ ಬಟ್ಟೆಯೊಳಗೆ ಅಡಗಿಸಿಕೊಳ್ಳುತ್ತಿರುವ ದೃಶ್ಯಗಳು ದಾಖಲಾಗಿವೆ. ಈ ವಿಡಿಯೋಗಳು ಕಳ್ಳತನಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ತನಿಖೆಯ ವೇಳೆ ಬಂಧಿತ ಆರೋಪಿ ಲವ್ ಕುಶ್ ಮಿಶ್ರಾ ನಿವಾಸದಿಂದ ಸುಮಾರು ₹10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟ್ರಸ್ಟ್ ಅಧಿಕಾರಿಗಳ ವಿಚಾರಣೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರಿಗೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ. ಚಂಪತ್ ರೈ ಮತ್ತು ಅನಿಲ್ ಮಿಶ್ರಾ ಈಗಾಗಲೇ ಟ್ರಸ್ಟ್ನಿಂದ ರಾಜೀನಾಮೆ ನೀಡಿದ್ದು, ಗೋಪಾಲ್ ರಾವ್ ಕೂಡ ಟ್ರಸ್ಟ್ ಚಟುವಟಿಕೆಗಳಿಂದ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಎಸ್ಬಿಐ ಸಿಬ್ಬಂದಿಯ ಪಾತ್ರವೂ ತನಿಖೆಯಡಿ
ದೇಣಿಗೆ ಹಣ ಎಣಿಕೆ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುತ್ತಿದ್ದ ಎಸ್ಬಿಐ ಸಿಬ್ಬಂದಿ ರತ್ನೇಶ್ ಮತ್ತು ಗಗನ್ದೀಪ್ ಅವರ ಪಾತ್ರವೂ ತನಿಖೆಯ ವ್ಯಾಪ್ತಿಗೆ ಬಂದಿದೆ. ಹಣ ಎಣಿಕೆ ವೇಳೆ ಇಬ್ಬರೂ ಎಣಿಕೆ ಕೊಠಡಿಗಳಲ್ಲಿ ಹಾಜರಿರುತ್ತಿದ್ದರು ಎಂದು ತಿಳಿದುಬಂದಿದೆ.ತನಿಖಾಧಿಕಾರಿಗಳು ಅವರ ವಿರುದ್ಧವೂ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ, ದೇಣಿಗೆ ಹಣ ಎಣಿಕೆ ಸಿಬ್ಬಂದಿಯನ್ನು ಪೊಲೀಸ್ ಪರಿಶೀಲನೆ ಇಲ್ಲದೆ ಕೇವಲ ಶಿಫಾರಸಿನ ಆಧಾರದ ಮೇಲೆ ನೇಮಕ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಎಂಟು ಆರೋಪಿಗಳ ಬಂಧನ
ಬಂಧಿತರಲ್ಲಿ ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ರಾಮಾಶಂಕರ್ ಮಿಶ್ರಾ, ಅವನೀಶ್, ಕರುಣೇಶ್ ಶುಕ್ಲಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಸೇರಿದ್ದಾರೆ. ಇವರಲ್ಲಿ ಆರು ಮಂದಿ ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕಗೊಂಡಿದ್ದು, ಟ್ರಸ್ಟ್ ಅಧಿಕಾರಿಗಳ ಸಂಬಂಧಿಕರು ಅಥವಾ ಆಪ್ತರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಎಸ್ಐಟಿ ತನಿಖೆ ವಿಸ್ತರಣೆ
ವಿಶೇಷ ತನಿಖಾ ತಂಡ (SIT) ಬಂಧಿತ ಆರೋಪಿಗಳಷ್ಟೇ ಅಲ್ಲದೆ, ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಸಂಭಾವ್ಯ ಶಾಮೀಲುತನದಿಂದ ದೇಣಿಗೆ ಹಣ ದುರುಪಯೋಗವಾಗಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದೆ.ಪ್ರಾಥಮಿಕ ತನಿಖಾ ವರದಿ ಆಧರಿಸಿ ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಕಳ್ಳತನ, ನಂಬಿಕೆ ದ್ರೋಹ, ಅಪರಾಧಿಕ ಸಂಚು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಲ್ಲರನ್ನೂ ಬಂಧಿಸಲಾಗಿದೆ. ಇದೇ ವೇಳೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಿಬ್ಬಂದಿ ನೇಮಕಾತಿ, ಪೊಲೀಸ್ ಪರಿಶೀಲನೆ ಹಾಗೂ ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಮ ಮಂದಿರ ಟ್ರಸ್ಟ್ ಚಿಂತನೆ ನಡೆಸಿದ್ದು, ಈ ಕುರಿತು ಜುಲೈ 11ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.