ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಅಡಕೆ ಲಾರಿಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆಯದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಿಸುವ ಲಾರಿಗಳನ್ನು ತಡೆದು ನಿಲ್ಲಿಸಲಾಗಿದ್ದು, ಇದರಿಂದಾಗಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ ರಾಜ್ಯದ ಅಡಿಕೆ ವ್ಯಾಪಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ರೈತ ಮುಖಂಡರು ಒತ್ತಾಯಿಸಿದ್ದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಗುಣಮಟ್ಟ ತಪಾಸಣೆ ಕಾರಣವೊಡ್ಡಿ ಏಕಾಏಕಿ ಅಡಿಕೆ ಸಾಗಿಸುವ ಲಾರಿಗಳನ್ನು ತಡೆಯಲಾಗುತ್ತಿದ್ದು, ಇದರಿಂದ ಅಡಿಕೆ ಆವಕದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ನಿರ್ದಿಷ್ಟ ಸಮಸ್ಯೆ ಇದ್ದಲ್ಲಿ ಅದನ್ನು ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಬದಲಾಗಿ ಸಾರಾಸಗಟಾಗಿ ಅಡಕೆ ಸಾಗಿಸುವ ಲಾರಿಗಳನ್ನು ತಡೆಯುವುದು ಸರಿಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ನಂತರ ಮಹಾರಾಷ್ಟ್ರ ಅಧಿಕಾರಿಗಳಿಗೆ ಈ ಸಂಬಂಧ ಸಿಎಂ ಫಡ್ನವೀಸ್ ಸೂಚನೆ ನೀಡಿ ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಲಾರಿಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆಯದಂತೆ ಹೇಳಿದ್ದಾರೆ. ಅಡಕೆ ಸಾಗಿಸುವ ಲಾರಿಗಳನ್ನು ಮುಂದೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದ್ದಾರೆ.