ತಿಂಗಳ ಸಂಬಳ ಬಂದ ಕೆಲವೇ ದಿನಗಳಲ್ಲಿ ಹಣ ಖಾಲಿಯಾಗುತ್ತಿದೆ ಎಂದು ಅನೇಕರು ಆತಂಕಪಡುತ್ತಾರೆ. ಆದರೆ ವಾರಕ್ಕೊಮ್ಮೆ ಕೇವಲ ಕೆಲ ನಿಮಿಷಗಳನ್ನು ಮೀಸಲಿಟ್ಟು ಖರ್ಚು-ವೆಚ್ಚಗಳ ಲೆಕ್ಕ ಪರಿಶೀಲನೆ ಮಾಡಿದರೆ ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿ, ಉಳಿತಾಯವನ್ನು ಹೆಚ್ಚಿಸಬಹುದು ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಿದ್ದಾರೆ.
ತಿಂಗಳ ಸಂಬಳ ಕೈಗೆ ಬಂದ ತಕ್ಷಣವೇ ಹಣ ಎಲ್ಲಿ ಹೋಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲವೇ? ಅನಗತ್ಯ ಖರ್ಚುಗಳು ಹೆಚ್ಚಾಗಿ, ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ಹಣವನ್ನು ಸರಿಯಾಗಿ ಉಳಿತಾಯ ಮಾಡಲು ಹಣಕಾಸು ತಜ್ಞರು ಸರಳ ಮತ್ತು ಪರಿಣಾಮಕಾರಿ ಸಲಹೆಯೊಂದನ್ನು ನೀಡಿದ್ದಾರೆ. ಹಣವನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ‘ವಾರದ ಹಣಕಾಸು ಪರಿಶೀಲನೆ’ (Weekly Review) ಅತ್ಯುತ್ತಮ ವಿಧಾನ ಎಂದು ಅವರು ಹೇಳುತ್ತಾರೆ.
ಏನಿದು ‘ವಾರದ ಪರಿಶೀಲನೆ’?
ವಾರವಿಡೀ ಯಾವ ಯಾವ ವಿಷಯಗಳಿಗೆ ಎಷ್ಟು ಹಣ ಖರ್ಚಾಯಿತು, ಎಷ್ಟು ಆದಾಯ ಬಂದಿದೆ ಎಂಬುದನ್ನು ವಾರಾಂತ್ಯದಲ್ಲಿ ಒಮ್ಮೆ ಕೂತು ಲೆಕ್ಕ ಹಾಕುವುದನ್ನೇ ‘ವಾರದ ಪರಿಶೀಲನೆ’ ಎಂದು ಕರೆಯಲಾಗುತ್ತದೆ.
ಈ ಲೆಕ್ಕಾಚಾರ ಮಾಡಲು ರಜೆಯ ದಿನವಾದ ಭಾನುವಾರ ಅತ್ಯುತ್ತಮ ಆಯ್ಕೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಭಾನುವಾರ ಸ್ವಲ್ಪ ಸಮಯ ಮೀಸಲಿಟ್ಟು ವಾರದ ಖರ್ಚಿನ ವಿವರಗಳನ್ನು ಬರೆದುಕೊಂಡರೆ, ಎಲ್ಲಿ ಅನಗತ್ಯ ಖರ್ಚು ಮಾಡಿದ್ದೀರಿ, ಎಷ್ಟು ಹಣ ವ್ಯರ್ಥವಾಗಿದೆ ಮತ್ತು ಇನ್ನಷ್ಟು ಹೇಗೆ ಉಳಿತಾಯ ಮಾಡಬಹುದು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ಇದರ ಪ್ರಯೋಜನವೇನು?
ಪ್ರತಿ ವಾರ ಈ ರೀತಿಯಾಗಿ ಪರಿಶೀಲನೆ ನಡೆಸುವುದರಿಂದ ಹಣಕಾಸಿನ ತಪ್ಪುಗಳನ್ನು ಸುಲಭವಾಗಿ ಗುರುತಿಸಬಹುದು. ಜೊತೆಗೆ ಮುಂದಿನ ವಾರದ ಖರ್ಚುಗಳನ್ನು ಯೋಜಿತವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.ಈ ರೀತಿಯಾಗಿ ನಿರಂತರವಾಗಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿದರೆ ಉಳಿಯುವ ಹಣವನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಬಹುದು ಅಥವಾ ಉತ್ತಮ ಆದಾಯ ತರುವ ಹೂಡಿಕೆಗಳಲ್ಲಿ ಹೂಡಿಕೆ ಮಾಡಬಹುದು.ಇಂತಹ ಸಣ್ಣ ಮಟ್ಟಿನ ಹಣಕಾಸಿನ ಶಿಸ್ತು ಜೀವನದಲ್ಲಿ ಅಳವಡಿಸಿಕೊಂಡರೆ, ಭವಿಷ್ಯದಲ್ಲಿ ಆರ್ಥಿಕ ತೊಂದರೆಗಳನ್ನು ತಪ್ಪಿಸಿ ಹೆಚ್ಚು ನೆಮ್ಮದಿಯ ಜೀವನ ನಡೆಸಬಹುದು ಎಂದು ಹಣಕಾಸು ತಜ್ಞರು ಸಲಹೆ ನೀಡಿದ್ದಾರೆ.
ಹಣಕಾಸಿನ ಭದ್ರತೆ ದೊಡ್ಡ ಆದಾಯದಿಂದ ಮಾತ್ರ ಸಿಗುವುದಿಲ್ಲ; ಉತ್ತಮ ಹಣಕಾಸಿನ ಶಿಸ್ತು ಮತ್ತು ಯೋಜಿತ ಖರ್ಚಿನಿಂದಲೂ ಸಾಧ್ಯ. ವಾರಕ್ಕೊಮ್ಮೆ ಖರ್ಚಿನ ಪರಿಶೀಲನೆ ಮಾಡುವಂತಹ ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಂಡರೆ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ, ಭವಿಷ್ಯಕ್ಕಾಗಿ ಉತ್ತಮ ಉಳಿತಾಯ ಮತ್ತು ಹೂಡಿಕೆಯನ್ನು ನಿರ್ಮಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.