ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ 19 ತಿಂಗಳ ಗಂಡು ಮಗು ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಮಗುವಿನ ತಂದೆ ಇಂದ್ರಾಜ್ ವಿಶ್ವಕರ್ಮಾ ಅವರ ದೂರಿನ ಪ್ರಕಾರ, ಮೇ 29, 2026ರಂದು ತಮ್ಮ ಪುತ್ರ ವಿನಯ್ ವಿಶ್ವಕರ್ಮಾಗೆ ಜ್ವರ, ಶೀತ ಹಾಗೂ ಕಣ್ಣು ಕೆಂಪಾಗಿದ್ದ ಕಾರಣ ಸಾಗರ್ ಜಿಲ್ಲೆಯ ಬಾಂದಾ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಒಪಿಡಿ ನೋಂದಣಿ ಬಳಿಕ ಕರ್ತವ್ಯದಲ್ಲಿದ್ದ ಸರ್ಕಾರಿ ವೈದ್ಯರು ಮಗುವನ್ನು ಪರೀಕ್ಷಿಸಿದರು. ಈ ವೇಳೆ, ಮೂಗಿಗೆ ಬಳಸಬೇಕಾದ ಸಾಲೈನ್ ನಾಸಲ್ ಡ್ರಾಪ್ಸ್ನ್ನು ತಪ್ಪಾಗಿ ಮಗುವಿನ ಕಣ್ಣಿಗೆ ಹಾಕಿದರು ಎಂದು ಕುಟುಂಬ ಆರೋಪಿಸಿದೆ.
ಜೊತೆಗೆ ಪ್ಯಾರಾಸಿಟಮಾಲ್ ಸಿರಪ್, ಒಂದು ಇಂಜೆಕ್ಷನ್ ಹಾಗೂ ಇತರೆ ಔಷಧಿಗಳನ್ನೂ ನೀಡಲಾಗಿದೆ. ಚಿಕಿತ್ಸೆಯ ಕೆಲವೇ ಗಂಟೆಗಳಲ್ಲಿ ಮಗುವಿನ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಹಲವು ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ ಯಾವುದೇ ಸುಧಾರಣೆ ಕಾಣಲಿಲ್ಲ. ಬಳಿಕ ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಯಿತು. ನಂತರ ಮಗುವನ್ನು ಭೋಪಾಲ್ AIIMS ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ತಜ್ಞ ವೈದ್ಯರು ಪರೀಕ್ಷಿಸಿದ ಬಳಿಕ, ಮಗುವಿನ ಎರಡೂ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ಕಳೆದುಹೋಗಿದೆ ಎಂದು ತಿಳಿಸಿದ್ದಾಗಿ ತಂದೆ ಆರೋಪಿಸಿದ್ದಾರೆ.
ತಪ್ಪಾದ ಚಿಕಿತ್ಸೆ ಅಥವಾ ವೈದ್ಯಕೀಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಸೂಚಿಸಿದ್ದಾರೆ ಎಂದು ಕುಟುಂಬ ಹೇಳಿದೆ. ಈ ಘಟನೆ ಬಳಿಕ ತಂದೆ ಬಾಂದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಂಬಂಧಪಟ್ಟ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವೈದ್ಯರ ಹೆಸರನ್ನು ತಿಳಿದಿಲ್ಲದಿದ್ದರೂ, ಮುಖ ನೋಡಿ ಗುರುತಿಸಬಲ್ಲೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬ್ಲಾಕ್ ಮೆಡಿಕಲ್ ಅಧಿಕಾರಿ ಯೋಗೇಂದ್ರ ಖಟಿಕ್, ಪ್ರಕರಣದ ತನಿಖೆಗೆ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ (CMHO) ಸಮಿತಿ ರಚಿಸಿದ್ದು, ತನಿಖಾ ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ ಮಗುವಿನ ಕುಟುಂಬವು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.