LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಎಸ್‌ಐಆರ್ ನಡೆಯುತ್ತಿರುವುದು ಇದು ಮೊದಲ ಬಾರಿಯಲ್ಲ, 1950ರಲ್ಲಿ ಚುನಾವಣಾ ಆಯೋಗ ರಚನೆಯಾಗಿ, 1952 ರಲ್ಲಿ ಪ್ರಥಮ ಚುನಾವಣೆ ನಡೆಯಿತು. ಆಗಿಂದ್ದಾಗ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಾ ಬಂದಿದೆ, ಆದರೆ ಅರ್ಹ ಮತದಾರರನ್ನು ಕೈಬಿಡುವ ಅಧಿಕಾರ ಆಯೋಗಕ್ಕೆ ಇಲ್ಲ. ಆಯೋಗ ಸಂವಿಧಾನಬದ್ಧವಾಗಿಯೇ ಕೆಲಸ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಅಂದರೆ 2014ರ ನಂತರ “ಮತ ದ್ರೋಹ” ಮಾಡಲಾಗುತ್ತಿದೆ, ಜನರ ಬಹುಮತದ ಮೂಲಕ ಗೆದ್ದವರು ಮಾತ್ರ ಅಧಿಕಾರ ನಡೆಸಲು ಯೋಗ್ಯರು. ಮೋಸ ಮಾಡಿದವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಎಸ್‌ಐಆರ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಡೀ ದೇಶದ 141 ಕೋಟಿ ಜನಸಂಖ್ಯೆಯಲ್ಲಿ 96 ಕೋಟಿ ಮತದಾರರಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನ 1,000 ದಿಂದ 5,000 ಮತಗಳ ಅಂತರದಿಂದ ಗೆದ್ದವರು ಇದ್ದಾರೆ. ಇಂತಹ ಕಡೆ ನಾಲ್ಕೈದು ಸಾವಿರ ಮತಗಳನ್ನು ಕಿತ್ತು ಹಾಕಿದರೆ ನಮ್ಮವರ ಗೆಲುವು ಕಷ್ಟ. ಇದಕ್ಕಾಗಿ ಪಕ್ಷ ಇಷ್ಟು ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಮತಗಳನ್ನು ಡಿಲೀಟ್ ಮಾಡುತ್ತಾರೆ. ಈ ಜನರೇ ಬಿಜೆಪಿ ಪಕ್ಷದ ಟಾರ್ಗೆಟ್ ಎಂದರು.

ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 36% ಮತ ಪಡೆದಿದೆ. 64% ಜನ ಬಿಜೆಪಿ ವಿರುದ್ಧವಾಗಿ ಮತ ಹಾಕಿದ್ದಾರೆ. ಈ 64% ನಲ್ಲಿ 10% ಮತಗಳನ್ನು ಕೈಬಿಟ್ಟರೆ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ನಮ್ಮ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಎಸ್‌ಐಆರ್ ಕಾರ್ಯ ನಡೆಯುವ ಜೂನ್ 30 ರಿಂದ ಜುಲೈ 29 ರ ವರೆಗೆ ಒಂದು ತಿಂಗಳ ಕಾಲ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಈಗ ದೇಶದಲ್ಲಿ‌ ಸಂವಿಧಾನಬದ್ಧವಾದ ಚುನಾವಣಾ ಆಯೋಗ ಇಲ್ಲ ಎನ್ನುವುದನ್ನು ಮರೆಯಬೇಡಿ. 2019ರಲ್ಲಿ ಬಿಜೆಪಿಯ 303 ಜನ ಗೆದ್ದಿದ್ದರು, ಈಗ 2024ರಲ್ಲಿ 240ಕ್ಕೆ ಇಳಿದಿದ್ದಾರೆ. ಇದಕ್ಕೆ ಬೆಲೆಯೇರಿಕೆ, ವಚನ ಭ್ರಷ್ಟತೆ, ನಿರುದ್ಯೋಗ ಕಾರಣ. ಈ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎಸ್‌ಐಆರ್ ಮೂಲಕ ಬದಲಾಯಿಸಲು ಹೊರಟಿದ್ದಾರೆ.

ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಗಳು. ಅವರಿಗೆ ಸರ್ವಾಧಿಕಾರದಲ್ಲಿ ಮಾತ್ರ ನಂಬಿಕೆ. ಅವರದ್ದು ಒನ್ ನೇಷನ್, ಒನ್ ಎಲೆಕ್ಷನ್ ನೀತಿ. ಹಿಂದುತ್ವದ ಮಾತಾಡುವವರು ಜಾತಿ, ವರ್ಣಾಶ್ರಮದ ಹೆಸರಲ್ಲಿ ಜನರನ್ನು ಶೋಷಣೆ ಮಾಡಿಲ್ಲವೇ? ಶೂದ್ರ ಸಮುದಾಯ ಬಿಜೆಪಿ ಜೊತೆ ಹೋಗಲೇಬಾರದು. ಸಾಮಾಜಿಕ ನ್ಯಾಯ ಬರಬಾರದು, ಬಂದರೆ ಶೋಷಣೆಗೆ ಅವಕಾಶ ಇಲ್ಲ ಎಂಬುದನ್ನು ಅವರು ಅರಿತಿದ್ದಾರೆ. ಬಿಜೆಪಿ ಪಕ್ಷದವರು ಸುಳ್ಳನ್ನು ಸೃಷ್ಟಿಸಿ, ಮಾರಾಟ ಮಾಡಿ, ಅದನ್ನೇ ಸತ್ಯ ಮಾಡುತ್ತಾರೆ.

13 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ, ಹರಿಯಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಫಲಿತಾಂಶ ಏನಾಗಿದೆ? ಕೇರಳದಲ್ಲಿ ಇವರ ಆಟ ನಡೆಯಲಿಲ್ಲ ಅಷ್ಟೆ. ಬಿಜೆಪಿ ಎರಡು ಬಾರಿಯೂ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು. ಅವರು ಅಧಿಕಾರದಲ್ಲಿ ಉಳಿಯಲು ಏನು ಮಾಡಲು ಹೇಸದವರು. ಆರ್‌ಎಸ್‌ಎಸ್ ನ ಸಂಸ್ಥಾಪಕ ಹೆಡ್ಗೆವಾರ್ ಅವರು ತಮ್ಮ ಆಪ್ತರನ್ನು ಇಟಲಿ, ಜರ್ಮನಿಗೆ ಕಳಿಸಿ ಅಲ್ಲಿ ಸರ್ವಾಧಿಕಾರಿ ಹೇಗೆ ನಡೆಯುತ್ತದೆ ಎಂದು ಅಧ್ಯಯನ ಮಾಡಲು ಬಿಟ್ಟಿದ್ದರು. ಅಲ್ಲಿಂದಲೇ ಇವರ ಸರ್ವಾಧಿಕಾರದ ವ್ಯಾಮೋಹ ಹುಟ್ಟಿದ್ದು. ನೀವು ಎಚ್ಚರ ತಪ್ಪಿದರೆ ನಿಮ್ಮನ್ನು ಮುಗಿಸ್ತಾರೆ. ಅದಕ್ಕಾಗಿ ನಮ್ಮ ಎಲ್ಲಾ ಹಾಲಿ, ಮಾಜಿ ಶಾಸಕರು, ಸಂಸದರು, ಸೋತ ಅಭ್ಯರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಜುಲೈ ತಿಂಗಳು ಬಹಳ ಮಹತ್ವದ ತಿಂಗಳು. ನೀವು ಬಿಎಲ್‌ಒ ಗಳ ಜೊತೆ ಸಮನ್ವಯ ಮಾಡಿಕೊಂಡು ಅವರ ಜೊತೆ ಮನೆ ಮನೆಗೆ ತೆರಳಬೇಕು. ಜೊತೆಗೆ ಕನಿಷ್ಠ ಪಕ್ಷ ಇಬ್ಬರು ಸ್ಥಳೀಯ ಮತದಾರರನ್ನು ಪ್ರತಿ ಬೂತ್‌ಗೆ ಆಯ್ಕೆ ಮಾಡಬೇಕು. ಯಾರಿಗೆಲ್ಲಾ ಶಾಸಕರಾಗುವ, ಸಂಸದರಾಗುವ ಆಸೆ ಇದೆ, ಅವರು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದೇಶವನ್ನು ಉಳಿಸಲು ಈ ಪ್ರಯತ್ನ ಮಾಡಬೇಕು. ಬಿಜೆಪಿಯ, ಮೋದಿಯವರ ಕುತಂತ್ರವನ್ನು ಬಯಲು ಮಾಡಲು ಕೆಲಸ ಮಾಡಬೇಕು. ದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ.

ಈ ಸಂಘ ಪರಿವಾರದವರು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ಸಂಪರ್ಕದಲ್ಲಿದ್ದರು ಗೊತ್ತಾ? ಹೆಡ್ಗೆವಾರ್, ಗೋಲ್ವಾಲ್ಕರ್ ಇವರೆಲ್ಲ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರ? ಸಾವರ್ಕರ್ ಅನ್ನು ವೈಭವೀಕರಿಸುತ್ತಾರೆ, ಅವರು ಕ್ಷಮಾಪಣೆ ಕೇಳಿ ಜೈಲಿಂದ ಹೊರಬಂದವರು. ಇವರ ಹಿಂಬಾಲಕರು ದೇಶ ಉಳಿಸ್ತಾರ? ನೀವು ಜಾಗೃತರಾಗದೆ ಹೋದರೆ ನಿಮ್ಮ ರಾಜಕೀಯ ಬದುಕಿನ ಮಾರಣಹೋಮ ನಿಶ್ಚಿತ. ನನ್ನ ರಾಜಕೀಯ ಮುಗಿಯುತ್ತಾ ಬಂದಿದೆ, ಆದರೆ ನೀವು ಇನ್ನೂ ರಾಜಕೀಯ ಮಾಡಬೇಕಾದವರು. ಹಾಗಾಗಿ ನೀವು ಮುಂದಿನ ಒಂದು ತಿಂಗಳು ಎಚ್ಚರಿಕೆ ವಹಿಸಲೇಬೇಕು.

ನಿಮಗೆ ಅವಕಾಶ ಇದೆ, ಈ ಅವಕಾಶದಿಂದ ವಂಚಿತರಾದರೆ ಅಪಾಯ ಕಟ್ಟಿಟ್ಟಬುತ್ತಿ. ಎನಮರೇಷನ್ ಫಾರ್ಮ್ ನಿಮಗೆ ಕೊಡುತ್ತಾರೆ, ಅದನ್ನು ಸರಿಯಾಗಿ ಭರ್ತಿ ಮಾಡಿ, ಸ್ವೀಕೃತಿ ದೃಢೀಕರಣ ಪಡೆಯಿರಿ. ಇದೇ ಬಹಳಾ ಮುಖ್ಯವಾದುದ್ದು. ಇದಕ್ಕಾಗಿ ಸುದರ್ಶನ್ ಅವರು ಇಡೀ ರಾಜ್ಯ ಸುತ್ತಿ ಜನಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಸಂವಿಧಾನ, ದೇಶ ಉಳಿಸುವುದು ಕಾಂಗ್ರೆಸ್ ಮಾತ್ರ. ಮುಂದಿನ ಒಂದು ತಿಂಗಳು ಎಲ್ಲ ಕೆಲಸ ಬಿಟ್ಟು ಎಸ್‌ಐಆರ್ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ಒಬ್ಬನೇ ಒಬ್ಬ ಅರ್ಹ ಮತದಾರ ಪಟ್ಟಿಯಿಂದ ಬಿಟ್ಟುಹೋಗಬಾರದು. ಹಾಗೆ ನೀವು ಕೆಲಸ ಮಾಡಬೇಕು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING NEWS: ಫ್ರಾನ್ಸ್ ನಲ್ಲಿ ನಾಗರಿಕ ವಿಮಾನ ಪತನ: 11 ಜನ ಸಾವು‘ಮಿಷನ್ ಇಂದ್ರಧನುಷ್’ ಯೋಜನೆಯಡಿ 7 ಪ್ರಮುಖ ರೋಗಗಳ ವಿರುದ್ಧದ ಲಸಿಕೆಗಳನ್ನು ಕಾಲಕಾಲಕ್ಕೆ ಮಕ್ಕಳಿಗೆ ಹಾಕಿಸಿನನ್ನ ಹೋರಾಟ ಡಿ.ಕೆ.ಶಿವಕುಮಾರ್​ ವಿರುದ್ಧ ಅಲ್ಲ; ರೈತರ ನಡುವೆ ಬಂದು ಚರ್ಚೆ ಮಾಡುವುದಕ್ಕೆ ನಾನು ಈಗಲೂ ಸಿದ್ಧ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಲೋಕೋಪಯೋಗಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬರೋಬ್ಬರಿ 3.48 ಕೋಟಿ ರೂಪಾಯಿ ಗುಳುಂ ಆರೋಪ; ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ಲೂಟಿಖಾಸಗಿ ಅಂಗಗಳಲ್ಲಿ MDMA ಅಡಗಿಸಿಟ್ಟಿದ್ದ ಮಹಿಳೆ ಸೇರಿ ಮಾದಕ ದ್ರವ್ಯ ಸಾಗಿಸುತ್ತಿದ್ದ 7 ಮಂದಿ ಅರೆಸ್ಟ್ಆರ್.ಎಸ್.ಎಸ್ ನವರು ಯಾರ ಬಳಿಯೂ ಕೈಚಾಚುವುದು ಬೇಡ: ಶುಲ್ಕ ಬೇಕಿದ್ದರೆ ನಾನೇ ಕಟ್ಟುತ್ತೇನೆ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ300 ಕೋಟಿ ರೂ. ವೆಚ್ಚದಲ್ಲಿ 7 ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಅಸ್ತು: ಸಂಸದ ಬಿ.ವೈ.ರಾಘವೇಂದ್ರದೇಶದಲ್ಲಿ ಒಮ್ಮೆ ಪ್ರಜಾಪ್ರಭುತ್ವ ಹೋದರೆ ಮತ್ತೆ ಗುಲಾಮಗಿರಿ ಬರುತ್ತದೆ ಎಚ್ಚರ! SIR ಪರಿಣಾಮ ಏನೆಂದು ಮಹಾರಾಷ್ಟ್ರ, ಹರಿಯಾಣ, ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿದೆ: ಮಾಜಿ ಸಿಎಂ ಸಿದ್ದರಾಮಯ್ಯಶಾಲೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಸುಟ್ಟು ಕರಕಲಾದ ಸಮವಸ್ತ್ರ, ಪಠ್ಯಪುಸ್ತಕಸುರಂಗ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ: ಬೆಂಗಳೂರಿನ ಸಂಚಾರ ದಟ್ಟಣೆ ಬಗೆಹರಿಸುವುದೇ ನಮ್ಮ ಉದ್ದೇಶ ಎಂದ ಡಿ.ಕೆ.ಶಿವಕುಮಾರ್