ಮುಂಬೈ: ಮದುವೆಯಾಗಿ ಕೇವಲ 48 ದಿನಗಳಲ್ಲೇ 26 ವರ್ಷದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಅಂಬರ್ನಾಥ್ನಲ್ಲಿ ಬೆಳಕಿಗೆ ಬಂದಿದೆ. ಪತಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಕಾರಣವೇ ಯುವತಿ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಯುವತಿಯನ್ನು ವಿಶಾಖಾ ತಿಲಕ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಡಾ. ನಿತಿನ್ ತಿಲಕ್ ಎಂಬ ವೈದ್ಯರಾಗಿದ್ದಾರೆ. ಏಪ್ರಿಲ್ 30ರಂದು ಇಬ್ಬರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯ ನಿಜಸ್ವರೂಪ ಹೊರಬಿದ್ದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮನೆಯನ್ನೇ ಡಿಜಿಟಲ್ ಜೈಲನ್ನಾಗಿ ಮಾಡಿದ್ದ ಪತಿ
ವಿಶಾಖಾ ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸಲು ನಿತಿನ್ ಮನೆಯಾದ್ಯಂತ CCTV ಕ್ಯಾಮೆರಾಗಳನ್ನು ಅಳವಡಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಲಗುವ ಕೋಣೆಯಲ್ಲೂ ಕ್ಯಾಮೆರಾ ಅಳವಡಿಸಿ ಪತ್ನಿಯ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಇದರಿಂದ ವಿಶಾಖಾ ಅವರ ಖಾಸಗಿತನ ಸಂಪೂರ್ಣ ಕಳೆದುಹೋಗಿದ್ದು, ಕೈದಿಯಂತೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಕುಟುಂಬದವರು ದೂರಿದ್ದಾರೆ.
ನೆರೆಹೊರೆಯವರೊಂದಿಗೆ ಮಾತನಾಡಿದ ಕಾರಣಕ್ಕೆ ಹಲ್ಲೆ
ವಿಶಾಖಾ ನೆರೆಮನೆಯ ಮಹಿಳೆಯರೊಂದಿಗೆ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ನಿತಿನ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಎರಡು ದಿನಗಳ ಮೊದಲು ಕೂಡ ಇದೇ ವಿಚಾರಕ್ಕೆ ಪತ್ನಿಯನ್ನು ಥಳಿಸಿದ್ದಾನೆ ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ
ನಿಗಾವಹಿಸುವುದಷ್ಟೇ ಅಲ್ಲದೆ, ವರದಕ್ಷಿಣೆ ಸಂಬಂಧಿತ ಕಿರುಕುಳವೂ ನಡೆದಿತ್ತು ಎಂದು ವಿಶಾಖಾ ಕುಟುಂಬ ಆರೋಪಿಸಿದೆ. ಮದುವೆಯ ವೇಳೆ ನಿರೀಕ್ಷಿತ ಮಟ್ಟದ ಉಡುಗೊರೆಗಳು ಸಿಗಲಿಲ್ಲ ಎಂದು ನಿತಿನ್ ತಾಯಿ ಛಾಯಾ ಹಾಗೂ ಸಹೋದರ ನಿನಾದ್ ನಿರಂತರವಾಗಿ ವಿಶಾಖಾಳನ್ನು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಪೋಷಕರ ಮನೆಯಿಂದ ಹಣ ಹಾಗೂ ಚಿನ್ನ ತರುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಿಸುವ ಮುನ್ನವೇ ನಡೆದ ದುರಂತ
ತನ್ನ ಮೇಲೆ ನಡೆಯುತ್ತಿದ್ದ ಕಿರುಕುಳದ ಬಗ್ಗೆ ವಿಶಾಖಾ ತನ್ನ ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಳು. ಮಗಳ ಪರಿಸ್ಥಿತಿ ಅರಿತ ಪೋಷಕರು ಆಕೆಯನ್ನು ಮನೆಗೆ ಕರೆತರುವ ಸಿದ್ಧತೆ ನಡೆಸಿದ್ದರು. ಆದರೆ ಅವರು ಬರುವ ಮುನ್ನವೇ ವಿಶಾಖಾ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವೈದ್ಯ ಬಂಧನ
ಘಟನೆ ಸಂಬಂಧ ಅಂಬರ್ನಾಥ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ನಿತಿನ್ ತಿಲಕ್, ಅವರ ತಾಯಿ ಛಾಯಾ ಹಾಗೂ ಸಹೋದರ ನಿನಾದ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಪೊಲೀಸರು ಡಾ. ನಿತಿನ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.