ತೆಲಂಗಾಣ : ಅದೊಂದು ಕಾಲವಿತ್ತು… ‘ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ’ ಎಂದು ಗುರುವನ್ನೇ ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದ ದಿನಗಳು. ಆದರೆ ಕಾಲ ಬದಲಾಗಿದೆ; ಅದೇ ಗುರುಗಳ ಮೇಲೆ ಕೈ ಎತ್ತುವ, ಕೊನೆಗೆ ಚಾಕುವಿನಿಂದ ಇರಿದು ಕೊಲ್ಲುವಷ್ಟು ವಿದ್ಯಾರ್ಥಿಗಳ ಮನಸ್ಥಿತಿ ವಿಕೃತವಾಗುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ. ತೆಲಂಗಾಣದಲ್ಲಿ ಶಾಲಾ ಪ್ರಾಂಶುಪಾಲೆಯನ್ನೇ ವಿದ್ಯಾರ್ಥಿಗಳು 27 ಬಾರಿ ಚಾಕುವಿನಿಂದ ಇರಿದು ಕೊಂದಿರುವ ಪ್ರಕರಣ, ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಬಿದ್ದಿರುವ ಕಹಿ ಕಳಂಕಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಹೌದು..ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ 48 ವರ್ಷದ ಶಾಲಾ ಪ್ರಾಂಶುಪಾಲೆ ಹಾಗೂ ನಾಗಾರ್ಜುನ ಪಬ್ಲಿಕ್ ಸ್ಕೂಲ್ನ ನಿರ್ದೇಶಕಿ ಕಲ್ಲು ರೂಪಾ ರೆಡ್ಡಿ ಅವರನ್ನು 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹಣ ಹಾಗೂ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೃತ್ಯ ಎಸಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 12ರಂದು ಕೊಂಡಮಲ್ಲೇಪಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ರೂಪಾ ರೆಡ್ಡಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಪತಿ ಹೈದರಾಬಾದ್ನಲ್ಲಿದ್ದು, ಪತ್ನಿಯ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು. ಬಳಿಕ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಗಾಗಿ ಪೊಲೀಸರು ಐದು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚು, ತಾಂತ್ರಿಕ ಮಾಹಿತಿ ಹಾಗೂ ಶಂಕಿತರ ಚಲನವಲನಗಳನ್ನು ಪರಿಶೀಲಿಸಿ, 80ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.
‘ಬಾಬು’ ಎಂಬ ಪದದಿಂದ ಸಿಕ್ಕಿತು ಮಹತ್ವದ ಸುಳಿವು
ತನಿಖೆಯ ವೇಳೆ ರೂಪಾ ರೆಡ್ಡಿ ತಮ್ಮ ಅತ್ತೆಯೊಂದಿಗೆ ಮಾತನಾಡಿದ್ದ ಕೊನೆಯ ಕರೆಯಲ್ಲಿ ‘ಬಾಬು’ ಎಂಬ ಪದ ಬಳಸಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕರೆ ಸ್ಥಗಿತಗೊಂಡ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
“ಅವರು ಮಾತುಕತೆಯ ವೇಳೆ ಕೊನೆಯದಾಗಿ ‘ಬಾಬು’ ಎಂಬ ಪದ ಬಳಸಿದ್ದರು. ಅವರು ಯಾರನ್ನು ಉದ್ದೇಶಿಸಿ ಈ ಪದ ಬಳಸಿರಬಹುದು ಎಂಬುದನ್ನು ತನಿಖೆ ನಡೆಸಿದಾಗ ಶಾಲೆಯ ವಿದ್ಯಾರ್ಥಿಗಳತ್ತ ನಮ್ಮ ಗಮನ ಹರಿಯಿತು” ಎಂದು ಹಿರಿಯ ಪೊಲೀಸ್ ಅಧಿಕಾರಿ ಶರತ್ ಚಂದ್ರ ಪವಾರ್ ತಿಳಿಸಿದ್ದಾರೆ.
ಪೊಲೀಸರು ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ, 10ನೇ ತರಗತಿಯ ಐವರು ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗಿರುವುದು ಪತ್ತೆಯಾಯಿತು. ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದು, ಪಾರ್ಟಿಗಳನ್ನು ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು.
ಬುಧವಾರ ಬೆಳಗ್ಗೆ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರೂಪಾ ರೆಡ್ಡಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಂಶುಪಾಲೆ ಬೈದಿದ್ದೇ ಕೊಲೆಗೆ ಕಾರಣ?
ಈ ಇಬ್ಬರು ವಿದ್ಯಾರ್ಥಿಗಳ ಹಾಸ್ಟೆಲ್ ಬ್ಯಾಗ್ಗಳಲ್ಲಿ ನಗದು ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ರೂಪಾ ರೆಡ್ಡಿ ಈ ಹಿಂದೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಅವರ ಪೋಷಕರಿಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳನ್ನು ಹಾಸ್ಟೆಲ್ನಿಂದ ಡೇ-ಸ್ಕಾಲರ್ಗಳಾಗಿ ಬದಲಾಯಿಸಿದ್ದರು.
ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರಾಂಶುಪಾಲೆ ವಿರುದ್ಧ ಅಸಮಾಧಾನ ಮೂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ
ಸೋಶಿಯಲ್ ಮೀಡಿಯಾದಲ್ಲಿ ಸುಲಭವಾಗಿ ಹಣ ಗಳಿಸುವುದು ಹೇಗೆ, ಕೊಲೆ ನಡೆಸುವುದು ಹೇಗೆ ಎಂಬುದರ ಬಗ್ಗೆ ಹುಡುಕಾಟ ನಡೆಸಿದ್ದ ವಿದ್ಯಾರ್ಥಿಗಳು, ಕೊನೆಗೆ ತಮ್ಮದೇ ಶಾಲೆಯ ಪ್ರಾಂಶುಪಾಲೆಯ ಹತ್ಯೆಗೆ ಸಂಚು ರೂಪಿಸಿದ್ದರು. ಐಷಾರಾಮಿ ಜೀವನದ ಆಸೆಗೆ ಬಿದ್ದ ವಿದ್ಯಾರ್ಥಿಗಳ ಆನ್ಲೈನ್ ಹುಡುಕಾಟವೇ ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯವನ್ನು ಬಯಲಿಗೆಳೆದಿದೆ
ಐದು ದಿನ ಸಂಚು, ಗುರುತು ಮರೆಮಾಚಲು ಗ್ಲೌಸ್
ಕೊಲೆ ಮಾಡುವ ಮೊದಲು ಆರೋಪಿಗಳು ಐದು ದಿನಗಳ ಕಾಲ ಸಂಚು ರೂಪಿಸಿ, ರೂಪಾ ರೆಡ್ಡಿ ಅವರ ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದ್ದರು. ಗುರುತು ಪತ್ತೆಯಾಗದಂತೆ ಮಾಡಲು ಚಾಕು ಹಾಗೂ ಗ್ಲೌಸ್ಗಳನ್ನು ಖರೀದಿಸಿದ್ದರು.
ಕೊಲೆ ನಡೆದ ದಿನ ಆರೋಪಿಗಳ ಪೈಕಿ ಒಬ್ಬ ಮಂಕಿ ಕ್ಯಾಪ್ ಹಾಗೂ ಗ್ಲೌಸ್ ಧರಿಸಿ ಮನೆಗೆ ಪ್ರವೇಶಿಸಿದ್ದ. ಮನೆಯ ಬೆಡ್ರೂಮ್ನಲ್ಲಿ ₹2.50 ಲಕ್ಷ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಆತ ಹಣ ತೆಗೆದುಕೊಂಡು ಪರಾರಿಯಾಗಲು ಮುಂದಾಗಿದ್ದ.
ಆದರೆ ಆತ ಧರಿಸಿದ್ದ ಮಂಕಿ ಕ್ಯಾಪ್ ಜಾರಿಬಿದ್ದಿದ್ದು, ರೂಪಾ ರೆಡ್ಡಿ ಆತನನ್ನು ಗುರುತಿಸಿದ್ದರು. ತಮ್ಮ ಗುರುತು ಬಹಿರಂಗವಾಗುವ ಭಯದಿಂದ ಆರೋಪಿ ಚಾಕುವಿನಿಂದ ರೂಪಾ ರೆಡ್ಡಿಗೆ 27 ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಳಿಕ ಆರೋಪಿಗಳು ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ಮಂಕಿ ಕ್ಯಾಪ್ಗಳನ್ನು ಹೂತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ನಂತರ ಗೋವಾಗೂ ಪ್ರವಾಸ ತೆರಳಿದ್ದರು ಎನ್ನಲಾಗಿದೆ.
ಐಷಾರಾಮಿ ಜೀವನವೇ ಪೊಲೀಸರಿಗೆ ಪ್ರಮುಖ ಸುಳಿವು
ಆರೋಪಿಗಳಿಂದ ₹1.54 ಲಕ್ಷ ನಗದು, ಅದರಲ್ಲಿ ರಕ್ತದ ಕಲೆಗಳಿದ್ದ ಕೆಲವು ನೋಟುಗಳು, ಅವರು ಖರೀದಿಸಿದ್ದ ಐಫೋನ್ ಹಾಗೂ ರೂಪಾ ರೆಡ್ಡಿ ಅವರ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊಲೆಗೂ ಮುನ್ನ ಆರೋಪಿಗಳು ತ್ವರಿತವಾಗಿ ಹಣ ಗಳಿಸುವ ಮಾರ್ಗಗಳ ಕುರಿತು ವೀಡಿಯೊ ಶೇರಿಂಗ್ ಪ್ಲಾಟ್ಫಾರ್ಮ್ನಲ್ಲಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿದೆ. ಅವರ ಏಕಾಏಕಿ ಹೆಚ್ಚಾದ ಖರ್ಚು ಮತ್ತು ಐಷಾರಾಮಿ ಜೀವನಶೈಲಿಯೇ ಕೊನೆಗೆ ಪೊಲೀಸರ ಅನುಮಾನಕ್ಕೆ ಕಾರಣವಾಗಿ, ಪ್ರಕರಣದ ಭಯಾನಕ ಸತ್ಯ ಬಯಲಾಗಿದೆ.