ಶಾಲೆ ಎಂದರೆ ಸರಸ್ವತಿಯ ಮಂದಿರ, ಜ್ಞಾನದ ದೇವಾಲಯ, ಮಕ್ಕಳ ಭವಿಷ್ಯ ರೂಪುಗೊಳ್ಳುವ ಸ್ಥಳ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕೇಂದ್ರಗಳಿಗಿಂತ ಹಣದ ವ್ಯವಹಾರಗಳ ಕೇಂದ್ರಗಳಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.
“ಇದು ಶಾಲೆಯಾ ಅಥವಾ ಬ್ಯಾಂಕಿನ ಸ್ಟ್ರಾಂಗ್ ರೂಮಾ?” ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಖಾಸಗಿ ಶಾಲೆಯೊಂದರ ರಹಸ್ಯ ಕೊಠಡಿಯಿಂದ ಬರೋಬ್ಬರಿ ₹1.77 ಕೋಟಿ ನಗದು ಪತ್ತೆಯಾಗಿದೆ!
ಆ ಕತ್ತಲೆ ಕೊಠಡಿಯ ರಹಸ್ಯ!
ಶಾಲೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದರ ಆಧಾರದ ಮೇಲೆ ವಿಶೇಷ ಪೊಲೀಸ್ ತಂಡ ಶಾಲೆಯ ಮೇಲೆ ದಾಳಿ ನಡೆಸಿತು.ಶಾಲೆಯ ಎಲ್ಲಾ ಕೊಠಡಿಗಳನ್ನು ಪರಿಶೀಲಿಸುತ್ತಿದ್ದಾಗ, ಒಂದು ಕೊಠಡಿಗೆ ದೊಡ್ಡ ತಾಳೆ ಹಾಕಿರುವುದು ಪೊಲೀಸರ ಗಮನಕ್ಕೆ ಬಂತು. ತಾಳೆ ಕೀಲಿಯನ್ನು ಕೇಳಿದಾಗ, ಶಾಲೆಯ ಅಕೌಂಟೆಂಟ್ ಮತ್ತು ಸಿಬ್ಬಂದಿ ತಮ್ಮ ಬಳಿ ಕೀಲಿ ಇಲ್ಲ ಎಂದು ಹೇಳಿ ತಡಬಡಿಸಿದರು.ಅನುಮಾನಗೊಂಡ ಪೊಲೀಸರು ತಕ್ಷಣವೇ ತಾಳೆ ಒಡೆದು ಒಳ ಪ್ರವೇಶಿಸಿದರು. ಒಳಗೆ ಹೋದಾಗ ಅಲ್ಮಾರಿಗಳು ಹಾಗೂ ಚೀಲಗಳಲ್ಲಿ ₹500 ಮತ್ತು ₹200 ಮುಖಬೆಲೆಯ ನೋಟುಗಳ ರಾಶಿ ಕಂಡುಬಂದಿತು. ಈ ದೃಶ್ಯ ನೋಡಿ ಪೊಲೀಸರು ಕೂಡ ಬೆಚ್ಚಿಬಿದ್ದರು.
ರಾತ್ರಿ ಪೂರ್ತಿ ನೋಟು ಎಣಿಸಿದ ಅಧಿಕಾರಿಗಳು!
ಕೊಠಡಿಯಲ್ಲಿ ಸಿಕ್ಕಿದ ಹಣದ ಪ್ರಮಾಣ ಎಷ್ಟೋ ಹೆಚ್ಚಾಗಿದ್ದರಿಂದ, ಅದನ್ನು ಕೈಯಿಂದ ಎಣಿಸಲು ಸಾಧ್ಯವಾಗಲಿಲ್ಲ.ತಕ್ಷಣವೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ಹಣ ಎಣಿಸುವ ಯಂತ್ರಗಳನ್ನು ಶಾಲೆಗೆ ತರಿಸಲಾಯಿತು. ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿ ರಾತ್ರಿ ಪೂರ್ತಿ ನೋಟುಗಳನ್ನು ಎಣಿಸಿದರು.ಕೊನೆಗೆ ಬೆಳಗ್ಗೆ ಲೆಕ್ಕ ಪೂರ್ಣಗೊಂಡಾಗ, ಒಟ್ಟು ₹1,77,45,000 (ಸುಮಾರು ₹1.77 ಕೋಟಿ) ಹಣ ಪತ್ತೆಯಾಗಿದೆ ಎಂಬುದು ತಿಳಿದುಬಂತು.
ಘಟನೆ ನಡೆದ ಶಾಲೆಯ ವಿವರ
- ಶಾಲೆಯ ಹೆಸರು: ಸೇಂಟ್ ಜೇವಿಯರ್ಸ್ ಇಂಟರ್ನ್ಯಾಷನಲ್ ಸ್ಕೂಲ್
- ಸ್ಥಳ: ಅಸನ್ಸೋಲ್, ಪಶ್ಚಿಮ ಬಂಗಾಳ
- ವಿಳಾಸ: ಜಿ.ಟಿ. ರಸ್ತೆ, ಮುರ್ಗಾಸೋಲ್ ಪ್ರದೇಶ, ಅಸನ್ಸೋಲ್
- ಪತ್ತೆಯಾದ ನಗದು: ₹1.77 ಕೋಟಿ
- ಅಕೌಂಟೆಂಟ್ ಹೆಸರು: ಸುಬ್ರತಾ ಚಟರ್ಜಿ
ಉತ್ತರ ನೀಡಲು ವಿಫಲವಾದ ಅಕೌಂಟೆಂಟ್
“ಇಷ್ಟು ದೊಡ್ಡ ಮೊತ್ತದ ಹಣ ಶಾಲೆಯ ಕೊಠಡಿಯಲ್ಲಿ ಏಕೆ ಇತ್ತು?” ಎಂಬ ಪ್ರಶ್ನೆಗೆ ಅಕೌಂಟೆಂಟ್ ಸುಬ್ರತಾ ಚಟರ್ಜಿ ಯಾವುದೇ ಸಮರ್ಪಕ ದಾಖಲೆಗಳನ್ನು ನೀಡಲು ವಿಫಲರಾದರು.ಈ ಹಣ ವಿದ್ಯಾರ್ಥಿಗಳ ಶುಲ್ಕದ ಹಣವೇ? ಅಥವಾ ಕಪ್ಪುಹಣವನ್ನು ಇಲ್ಲಿ ಅಡಗಿಸಿಟ್ಟಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.
ಹಣಕ್ಕೆ ಸಂಬಂಧಿಸಿದ ಯಾವುದೇ ರಸೀದಿ ಅಥವಾ ಬ್ಯಾಂಕ್ ದಾಖಲೆಗಳು ಲಭ್ಯವಾಗದ ಕಾರಣ, ಪೊಲೀಸರು ಹಣವನ್ನು ವಶಪಡಿಸಿಕೊಂಡು ಅಕೌಂಟೆಂಟ್ ಹಾಗೂ ಶಾಲಾ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ಸುದ್ದಿ ವೈರಲ್ ಆದ ನಂತರ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಕ್ಕಳ ಭವಿಷ್ಯಕ್ಕಾಗಿ ಪಾವತಿಸಿದ ಶುಲ್ಕದ ಹಣವನ್ನು ಬ್ಯಾಂಕ್ನಲ್ಲಿ ಇಡದೆ ರಹಸ್ಯ ಕೊಠಡಿಯಲ್ಲಿ ಏಕೆ ಅಡಗಿಸಿದ್ದಾರೆ?”ಇದು ಶಿಕ್ಷಣದ ದೇವಾಲಯವಲ್ಲ, ಕಪ್ಪುಹಣದ ಗೋದಾಮು!”ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಶಾಲೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಪ್ರಕರಣದಲ್ಲಿ ಇತರ ಪ್ರಭಾವಿ ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.