ಪ್ಯಾಕೇಜ್ಡ್ ಆಹಾರಗಳಲ್ಲಿ ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ ಅದನ್ನು ಗ್ರಾಹಕರಿಗೆ ಎಚ್ಚರಿಕೆ ಲೇಬಲ್ ಮೂಲಕ ತಿಳಿಸುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ಯನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಗುರುವಾರ ಈ ಕುರಿತು ವಿಚಾರಣೆ ನಡೆಸಿತು. ಪ್ಯಾಕೇಜ್ಡ್ ಆಹಾರದಲ್ಲಿರುವ ಪೌಷ್ಟಿಕಾಂಶದ ಅಪಾಯಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಲು ಎಚ್ಚರಿಕೆ ಲೇಬಲ್ ಅಳವಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಯಿತು.
‘ಜನರು ಆರೋಗ್ಯವಾಗಿರಬಾರದೇ?’
ಎಚ್ಚರಿಕೆ ಲೇಬಲ್ ಜಾರಿಗೆ ತರಲು ಏಕೆ ವಿಳಂಬ ಮಾಡಲಾಗುತ್ತಿದೆ ಎಂದು FSSAIಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, “ಈ ದೇಶದ ಜನರು ಆರೋಗ್ಯವಾಗಿರಬಾರದು ಎಂದು ನೀವು ಬಯಸುತ್ತೀರಾ? ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳು?” ಎಂದು ಪ್ರಶ್ನಿಸಿತು.“ಇದುವರೆಗೆ ನೀವು ಏನು ಮಾಡಿದ್ದೀರಿ? ನಿಮ್ಮ ಮೇಲೆ ಇರುವ ಒತ್ತಡ ನಮಗೆ ಗೊತ್ತಿದೆ. ನೀವೇ ಕ್ರಮ ಕೈಗೊಳ್ಳುತ್ತೀರಾ ಅಥವಾ ನಾವು ಆದೇಶ ಹೊರಡಿಸಬೇಕೇ?” ಎಂದು ನ್ಯಾಯಪೀಠ ಪ್ರಶ್ನಿಸಿತು. ಪ್ಯಾಕೇಜ್ಡ್ ಆಹಾರ ಉತ್ಪಾದನಾ ಉದ್ಯಮದಿಂದ ಬರುತ್ತಿರುವ ಒತ್ತಡವೂ ಎಚ್ಚರಿಕೆ ಲೇಬಲ್ ಜಾರಿಗೆ ವಿಳಂಬವಾಗಲು ಕಾರಣವಾಗಿರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಎರಡು ವಾರಗಳ ಗಡುವು
ಕೇಂದ್ರ ಸರ್ಕಾರ ಮತ್ತು FSSAIಗೆ ತಮ್ಮ ಅಂತಿಮ ನಿರ್ಧಾರವನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.ವಿಚಾರಣೆ ವೇಳೆ ಕೇಂದ್ರ ಸರ್ಕಾರ ಮತ್ತು FSSAI ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಬೃಜೇಂದರ್ ಚಹರ್ ವಾದಿಸಿ, ಕೆಲವು ಸಾಂಪ್ರದಾಯಿಕ ಭಾರತೀಯ ಆಹಾರಗಳಲ್ಲಿ ಸಹಜವಾಗಿಯೇ ಸ್ಯಾಚುರೇಟೆಡ್ ಕೊಬ್ಬು ಅಥವಾ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಎಲ್ಲಾ ಉತ್ಪನ್ನಗಳಿಗೆ ಲೇಬಲ್ ಅಳವಡಿಸುವುದರಿಂದ ತೊಂದರೆ ಉಂಟಾಗಬಹುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಗ್ರಾಹಕರಿಗೆ ಆಹಾರದ ಪೌಷ್ಟಿಕಾಂಶದ ಅಪಾಯಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿತು. FSSAIಯ ತಜ್ಞರ ಸಮಿತಿಗೆ ಈ ಹಿಂದೆ ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ ಕುರಿತು ವಿವಿಧ ಹಿತಾಸಕ್ತಿದಾರರಿಂದ ಸುಮಾರು 14,000 ಅಭಿಪ್ರಾಯಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಸಮಾಲೋಚನೆ ನಡೆಸುವ ಬಗ್ಗೆ ಚಿಂತಿಸಲಾಗಿತ್ತು.