ಪಟಿಯಾಲ: ಪಂಜಾಬ್ನ ಪಟಿಯಾಲ ನಗರದ ಘುಮನ್ ನಗರದಲ್ಲಿ ಭೀಕರ ನಾಯಿ ದಾಳಿ ಪ್ರಕರಣವೊಂದು ನಡೆದಿದ್ದು, ಮಾಲೀಕರ ಸಾಕು ನಾಯಿಯಾದ ‘ಪಿಟ್ಬುಲ್’ ದಾಳಿಯಿಂದಾಗಿ ಬಾಡಿಗೆ ಮನೆ ನೋಡಲು ಬಂದಿದ್ದ ದಂಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬೆಚ್ಚಿಬೀಳಿಸುವ ದೃಶ್ಯಗಳು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂಕಿತ್ ಸಭರ್ವಾಲ್ ಮತ್ತು ಅವರ ಪತ್ನಿ ಶಿಫಾಲಿ ಎಂಬ ದಂಪತಿ ರಿಯಲ್ ಎಸ್ಟೇಟ್ ಬ್ರೋಕರ್ ಅವರೊಂದಿಗೆ ಬಾಡಿಗೆ ಮನೆ ವೀಕ್ಷಣೆಗೆ ಘುಮನ್ ನಗರಕ್ಕೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.
https://x.com/nextminutenews7/status/2087498309552500875
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ:
ದಂಪತಿ ಬಾಡಿಗೆ ಮನೆಯ ಗೇಟ್ ತೆರೆದು ಡೋರ್ ಬೆಲ್ ಬಾರಿಸುತ್ತಿದ್ದಂತೆ, ಮನೆಯೊಳಗಿದ್ದ ಪಿಟ್ಬುಲ್ ನಾಯಿಯು ಕ್ಷಣಾರ್ಧದಲ್ಲಿ ಹೊರಬಂದು ಶಿಫಾಲಿ ಅವರ ಮೇಲೆ ಧಾವಿಸಿ ದಾಳಿ ನಡೆಸಿದೆ. ನಾಯಿಯು ಆಕೆಯ ತೋಳು, ಕಾಲು ಹಾಗೂ ದೇಹದ ವಿವಿಧ ಭಾಗಗಳಿಗೆ ಕಡಿದು ಆಳವಾದ ಗಾಯಗಳನ್ನು ಉಂಟುಮಾಡಿದೆ.
ಈ ವೇಳೆ ಪತ್ನಿಯನ್ನು ರಕ್ಷಿಸಲು ಧಾವಿಸಿದ ಅಂಕಿತ್ ಅವರ ಮೇಲೆಯೂ ಪಿಟ್ಬುಲ್ ಎರಗಿದ್ದು, ಅವರ ಕಾಲು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ. ನಾಯಿಯಿಂದ ತಪ್ಪಿಸಿಕೊಳ್ಳಲು ದಂಪತಿ ಹರಸಾಹಸ ಪಡುತ್ತಿರುವುದನ್ನು ಕಂಡು, ಸ್ಥಳದಲ್ಲಿದ್ದ ನಾಲ್ಕೈದು ಜನ ಸ್ಥಳೀಯರು ಕೋಲು ಹಾಗೂ ವೈಪರ್ಗಳನ್ನು ಹಿಡಿದು ನಾಯಿಯನ್ನು ಬೆದರಿಸಿ, ಗಾಯಗೊಂಡ ದಂಪತಿಯನ್ನು ರಕ್ಷಿಸಿದ್ದಾರೆ.
ದಾಳಿಗೊಳಗಾದ ದಂಪತಿಯನ್ನು ತಕ್ಷಣವೇ ಅಮರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿಫಾಲಿ ಅವರ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮಾಲೀಕರ ವಿರುದ್ಧ ಎಫ್ಐಆರ್ ದಾಖಲು:
“ನಾವು ಬಾಡಿಗೆ ಮನೆ ನೋಡಲು ಬಂದಾಗ ಏಕಾಏಕಿ ಈ ದಾಳಿ ನಡೆದಿದೆ. ಸಾಕು ನಾಯಿಯನ್ನು ಯಾವುದೇ ನಿಯಂತ್ರಣವಿಲ್ಲದೆ ಹೊರಗೆ ಬಿಟ್ಟು ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಸಂತ್ರಸ್ತ ಅಂಕಿತ್ ಪೋಲಿಸರಲ್ಲಿ ಒತ್ತಾಯಿಸಿದ್ದಾರೆ.
ಸಂತ್ರಸ್ತರ ಹೇಳಿಕೆಯನ್ನು ಆಧರಿಸಿ ನಾಯಿಯ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 291ರ ಅಡಿಯಲ್ಲಿ ಎಫ್ಐಆರ್ (FIR) ದಾಖಲಿಸಲಾಗುವುದು ಎಂದು ಪಟಿಯಾಲ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪಟಿಯಾಲದಲ್ಲಿ ಪಿಟ್ಬುಲ್ ಸಾಕುವುದು ನಿಷೇಧ:
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಟಿಯಾಲ ಮಹಾನಗರ ಪಾಲಿಕೆ ಆಯುಕ್ತೆ ಪೂಜಾ ಗ್ರೆವಾಲ್, “ಪಾಲಿಕೆಯ ನಿಯಮಾವಳಿಗಳ ಪ್ರಕಾರ ಅತ್ಯಂತ ಹಿಂಸ್ರ ಪ್ರವೃತ್ತಿಯ ‘ಪಿಟ್ಬುಲ್’ ತಳಿಯ ನಾಯಿಗಳನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಮ್ಮ ತಂಡ ಈಗಾಗಲೇ ಸಂತ್ರಸ್ತರನ್ನು ಸಂಪರ್ಕಿಸಿದ್ದು, ನಿಯಮ ಉಲ್ಲಂಘಿಸಿದ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದಿದ್ದಾರೆ.
ಪಂಜಾಬ್ನಲ್ಲಿ ನಾಯಿ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಭೀತಿ ವಾತಾವರಣ ನಿರ್ಮಾಣವಾಗಿದೆ.