ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯುವುದಿಲ್ಲ. ಪ್ರಕರಣದ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ (ಆಗಸ್ಟ್ 17) ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ಗೆ ಸುದೀರ್ಘ ಪ್ರತ್ಯುತ್ತರ ಸಲ್ಲಿಕೆ ಮಾಡಿದೆ. ರಾಜ್ಯದಲ್ಲಿ ‘ಎಲ್ ನಿನೋ’ ಪರಿಣಾಮದಿಂದಾಗಿ ಭೀಕರ ಮಳೆ ಕೊರತೆ ಎದುರಾಗಿದ್ದರೂ ಸಿಡಬ್ಲ್ಯೂಎಂಎ (CWMA) ಶಿಫಾರಸಿಗಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.
ಈ ವರ್ಷ ಎಲ್ ನಿನೋ ಪರಿಣಾಮದಿಂದಾಗಿ ಸಂಕಷ್ಟ ಎದುರಾಗಿದ್ದು, ಕರ್ನಾಟಕದ 4 ಡ್ಯಾಂಗಳ ಒಳಹರಿವಿನಲ್ಲಿ ಶೇಕಡಾ 65.76ರಷ್ಟು ಕೊರತೆ ಉಂಟಾಗಿದೆ. ಹೀಗಿದ್ದರೂ CWMA ಶಿಫಾರಸುಗಳಿಗಿಂತ ಹೆಚ್ಚಿನ ನೀರನ್ನು ಬಿಳಿಗುಂಡ್ಲು ಬಳಿ ಬಿಡುಗಡೆ ಮಾಡಲಾಗಿದೆ. ವಯನಾಡು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಜುಲೈ 29ರಿಂದ ಆಗಸ್ಟ್ 10ರವರೆಗೆ ಜಲಾಶಯಗಳಿಂದ ಹೆಚ್ಚುವರಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ.
ಈಗಾಗಲೇ ಕರ್ನಾಟಕದ ಜಲಾಶಯಗಳಿಂದ ಒಟ್ಟು 1,64,080 ಕ್ಯೂಸೆಕ್ ನೀರು ಹರಿದಿದ್ದು, ಬಿಳಿಗುಂಡ್ಲು ಮೂಲಕ 86,797 ಕ್ಯೂಸೆಕ್ ನೀರು ತಮಿಳುನಾಡು ತಲುಪಿದೆ. ತಮಿಳುನಾಡು ಶೇ.26.954 TMC ಸಂಕಷ್ಟದ ಕೊರತೆಯನ್ನು ಲೆಕ್ಕಹಾಕಿದೆ. ಬಿಳಿಗುಂಡ್ಲುವಿನಲ್ಲಿರುವ CWRC ಗೇಜ್ ಸ್ಟೇಷನ್ ನೀರಿನ ಹರಿವನ್ನ ದಾಖಲಿಸಿದೆ. ಗೇಜ್ ಸ್ಟೇಷನ್ ಗಂಟೆಗೊಮ್ಮೆ ನೀರಿನ ಹರಿವನ್ನು ದಾಖಲಿಸುತ್ತಿದ್ದು, ನೀರಿನ ಹರಿವನ್ನು ದಾಖಲಿಸಲು ಪ್ರತ್ಯೇಕ ಮೇಲ್ವಿಚಾರಣೆಯ ಅಗತ್ಯವಿಲ್ಲ. ಸಂಕಷ್ಟದ ವರ್ಷದಲ್ಲಿ ಪ್ರೊ-ರೇಟಾ ಪರಿಗಣಿಸದಿದ್ದರೆ ನ್ಯಾಯಸಮ್ಮತವಾಗಲ್ಲ ಎಂದು ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲ ಮೋಹನ್ ವಿ.ಕಾತರಕಿ ಪ್ರತಿಕ್ರಿಯೆ ಸಲ್ಲಿಕೆ ಮಾಡಿದ್ದಾರೆ.