ಬೆಂಗಳೂರು: ವಿವಾಹಿತ ಪುತ್ರಿ ಮೃತ ಸರ್ಕಾರಿ ನೌಕರನ ಮೇಲೆ ಅವಲಂಬಿತರಾಗಿದ್ದರೆ, ಅವರೊಂದಿಗೆ ವಾಸಿಸುತ್ತಿದ್ದರೆ ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಅರ್ಹ ಎಂದು ಹೈಕೋರ್ಟ್ ಆದೇಶಿಸಿದೆ.
ಚಿತ್ರದುರ್ಗದ ಜೋಗಿಮಟ್ಟಿಯ ಆರ್. ಸವಿತಾ ಅವರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜೆ. ಪಂಡಿತ್ ಮತ್ತು ಕೆ. ರಾಜೇಶ್ ಅವರನ್ನೊಳಗೊಂಡ ವಿಭಾಗೀಯಪೀಠ ಈ ಆದೇಶ ನೀಡಿದೆ.
ಕುಟುಂಬದ ವ್ಯಾಖ್ಯಾನದಲ್ಲಿ ವಿವಾಹಿತ ಹೆಣ್ಣು ಮಕ್ಕಳನ್ನು ಸೇರಿಸುವ ಕರ್ನಾಟಕ ನಾಗರೀಕ ಸೇವೆಗಳ ಅನುಕಂಪದ ಆಧಾರದ ಮೇಲೆ ನೇಮಕಾತಿ ನಿಯಮಗಳು 1996 ತಿದ್ದುಪಡಿಯು ಹಿಂದಿನಿಂದಲೂ ಜಾರಿಯಲ್ಲಿದೆ ಮತ್ತು ವಿವಾಹಿತ ಪುತ್ರಿ ಅನುಕಂಪದ ನೇಮಕಾತಿಗೆ ಅರ್ಹರಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿದೆ.
ಕುಟುಂಬ ಮತ್ತು ಅವಲಂಬಿ ಎಂಬ ಪದಗಳ ವ್ಯಾಖ್ಯಾನವನ್ನು ಅವಿವಾಹಿತರು, ವಿವಾಹಿತರು, ವಿಚ್ಛೇದಿತರು ಅಥವಾ ವಿಧವೆಯೇ ಆಗಿರಲಿ, ಅವರು ಮೃತ ಸರ್ಕಾರಿ ನೌಕರನ ಮೇಲೆ ಅವಲಂಬಿತರಾಗಿದ್ದರೆ ಮತ್ತು ಅವರೊಂದಿಗೆ ವಾಸಿಸುತ್ತಿದ್ದಾರೆ ಅವರನ್ನು ಸೇರ್ಪಡೆ ಮಾಡಲು ವಿಸ್ತರಣೆ ಮಾಡಲಾಗಿತ್ತು.
ಕರ್ನಾಟಕ ನಾಗರೀಕ ಸೇವಾ ನಿಯಮಗಳಿಗೆ ತಿದ್ದುಪಡಿಯನ್ನು ಪರ್ಯಾಯದ ಮೂಲಕ ಮಾಡಲಾಗಿದೆ. ಬದಲಿ ನಿಬಂಧನೆ ಅದರ ಆರಂಭದಿಂದಲೂ ಕಾನೂನಿನ ಭಾಗವಾಗಿದೆ ಎಂದು ಪರಿಗಣಿಸಲಾಗುತ್ತದೆ. ಅರ್ಜಿದಾರರು ವಿವಾಹಿತ ಪುತ್ರಿ ಎನ್ನುವ ಕಾರಣಕ್ಕೆ ಮಾತ್ರ ಅನುಕಂಪದ ಆಧಾರದಲ್ಲಿ ನೇಮಕಾತಿ ಅರ್ಜಿ ತಿರಸ್ಕರಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಹೀಗಾಗಿ ವಿವಾಹಿತ ಹೆಣ್ಣು ಮಕ್ಕಳು ಇತರೆ ಅರ್ಹತಾ ಅವಶ್ಯಕತೆಗಳನ್ನು ಪೂರೈಸಿದರೆ ಅನುಕಂಪದ ನೇಮಕಾತಿಗೆ ಪರಿಗಣಿಸಲು ಅರ್ಹರಾಗಿರುತ್ತಾರೆ. ಅರ್ಜಿದಾರರ ತಾಯಿ ನಿವೃತ್ತ ಸರ್ಕಾರಿ ನೌಕರರು, ಅವರು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿಯನ್ನು ತಿರಸ್ಕರಿಸಿದ ಕೆಎಟಿ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿದ್ದು, ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಿದೆ.