ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯವಿದ್ದರೆ ಸುಧಾಕರ್ ನೇರವಾಗಿ ನನ್ನ ವಿರುದ್ಧವೇ ಕಣಕ್ಕಿಳಿಯಲಿ ಎಂದು ವಿಶ್ವನಾಥ್ ಸವಾಲು ಹಾಕಿದ್ದರು. ಇದೀಗ ಈ ಸವಾಲಿಗೆ ಪ್ರತಿಕ್ರಿಯಿಸಿರುವ ಡಾ.ಸುಧಾಕರ್, ಎಸ್.ಆರ್.ವಿಶ್ವನಾಥ್ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಅವರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸಲಿ, ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ನಾನು ಯಲಹಂಕ ಕ್ಷೇತ್ರದಲ್ಲಿಯೇ ನಿಂತು ಅವರನ್ನು ಸೋಲಿಸುತ್ತೇನೆ. ಯಲಹಂಕ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನನ್ನ ಜೊತೆ ನಿಲ್ಲಲಿ. ಯಲಹಂಕದಲ್ಲಿ ಯಾರು ಗೆಲ್ತಾರೆ ಎಂಬುದನ್ನು ಆಮೇಲೆ ನೋಡೋಣ. ಕ್ಯಾಮರಾಗಳ ಮುಂದೆ ನಿಂತು ಆ ರೋತಿ ಮಾತನಾಡುವುದನ್ನು ಅವರು ಮೊದಲು ನಿಲ್ಲಿಸಬೇಕು ಎಂದು ಗುಡುಗಿದರು.
ಎಸ್.ಆರ್.ವಿಶ್ವನಾಥ್ ಅವರ ಸವಾಲು ಸ್ವೀಕರಿಸಿದ್ದೇನೆ. ಎಲ್ಲಿ ಬೇಕಾದರೂ ಸ್ಪರ್ಧಿಸುತ್ತೇನೆ. ಹೈಕಮಾಂಡ್ ನಾಯಕರು ಏನು ಹೇಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.