ಕರ್ನಾಟಕದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ನೋಂದಾಯಿತ ಸಂಘಟನೆಯೇ, ಅವರ ಆದಾಯದ ವಿವರವನ್ನು ಒದಗಿಸಲಿ ಎಂದು ನೀಡಿದ್ದ ಹೇಳಿಕೆ ವಿವಾದವನ್ನು ಎಬ್ಬಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ವಿವಾದದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.
ಇದೀಗ ಮತ್ತೋರ್ವ ವ್ಯಕ್ತಿ ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದು, ಮತ್ತೆ ಆರ್ಎಸ್ಎಸ್ ಅಭಿಮಾನಿಗಳು ಹಾಗೂ ಹಿಂಬಾಲಕರು ಕಿಡಿಕಾರಿದ್ದಾರೆ. ಉತ್ತರ ಪ್ರದೇಶದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಆರ್ಎಸ್ಎಸ್ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಅಸಲಿ ಹಾಗೂ ನಕಲಿ ಹಿಂದೂಗಳ ಕುರಿತ ಚರ್ಚೆಯಲ್ಲಿ ನಕಲಿ ಹಿಂದೂಗಳು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ‘ಆರ್ಎಸ್ಎಸ್ನವರು ನಕಲಿ ಹಿಂದೂಗಳು ಹಾಗೂ ಅವರ ಮೂಲಕ ಬಿಜೆಪಿಯಲ್ಲಿ ಕುಳಿತಿರುವವರು ನಕಲಿ ಹಿಂದೂಗಳು. ಆರ್ಎಸ್ಎಸ್ನವರು ನಕಲಿ ಹಿಂದೂಗಳು ಎಂದು ನೋಂದಾಯಿತರಾಗಿದ್ದಾರೆ, ಸದ್ಯಕ್ಕೆ ಅವರು ನಕಲಿ ಹಿಂದೂಗಳು ಎಂಬುದು ಸಾಬೀತಾಗಿದೆ’ ಎಂದರು.
ಇನ್ನು ನಕಲಿ ಹಾಗೂ ಅಸಲಿ ಹಿಂದೂಗಳಿಗೆ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ‘ಅಸಲಿ ಹಿಂದೂಗಳು ವೇದ ಹಾಗೂ ಪುರಾಣಗಳನ್ನು ನಂಬುತ್ತಾರೆ, ವೇದ ಹಾಗೂ ಪುರಾಣಗಳಲ್ಲಿ ಏನಾದರೂ ಸಂಶಯವಿದ್ದರೆ ಅದನ್ನು ಗುರುಗಳ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳುತ್ತಾರೆ. ನಕಲಿ ಹಿಂದೂಗಳು ವೇದ, ಪುರಾಣ ಹಾಗೂ ಗುರು ಇದ್ಯಾವುದನ್ನೂ ಸಹ ನಂಬುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದು, ಆರ್ಎಸ್ಎಸ್ನವರು ಇವುಗಳನ್ನು ಪಾಲಿಸದ ನಕಲಿ ಹಿಂದೂಗಳು ಎಂದಿದ್ದಾರೆ.
ಸದ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿಗಳ ಈ ಹೇಳಿಕೆ ವೈರಲ್ ಆಗಿದ್ದು, ಆರ್ಎಸ್ಎಸ್ ಹಿಂಬಾಲಕರು ಸ್ವಾಮೀಜಿ ವಿರುದ್ಧ ಕೆಂಡಕಾರುತ್ತಿದ್ದಾರೆ.