ಗದಗ: ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿ ಮದುವೆಯಾಗಬೇಕಿದ್ದ ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದರಿಂದ ಅದೇ ಮುಹೂರ್ತದಲ್ಲಿ ಬೇರೆ ಯುವತಿಯೊಂದಿಗೆ ಮದುವೆ ನೆರವೇರಿದೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸೋಮವಾರ ಘಟನೆ ನಡೆದಿದೆ. ನರಗುಂದದ ಕಸಬಾ ಬಡಾವಣೆಯ ನಿಂಗಪ್ಪ ಬಸಪ್ಪ ಸವದಿ ಅವರ ಮದುವೆ ಬಾದಾಮಿ ತಾಲೂಕಿನ ಮಾಗನೂರು ಗ್ರಾಮದ ಯುವತಿಯೊಂದಿಗೆ ಸೋಮವಾರ ನಡೆಯಬೇಕಿತ್ತು.
ಆದರೆ, ವೈಯಕ್ತಿಕ ಕಾರಣದಿಂದ ಶನಿವಾರ ರಾತ್ರಿ ಏಕಾಏಕಿ ಯುವತಿ ಮದುವೆಗೆ ನಿರಾಕರಿಸಿದ್ದಾರೆ. ಈ ಬಗ್ಗೆ ಆಕೆಯ ಪೋಷಕರು ಲಿಖಿತ ಮುಚ್ಚಳಿಕೆ ಪತ್ರವನ್ನು ಬರೆದು ಕೊಟ್ಟಿದ್ದಾರೆ. ಆದರೆ ವರನ ಪೋಷಕರಿಗೆ ಇದು ಶಾಕ್ ನೀಡಿದೆ. ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕೊನೆ ಕ್ಷಣದಲ್ಲಿ ಮದುವೆ ನಿಲ್ಲಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.
ಕೊನೆಗೆ ಹಿರಿಯರು, ಗುರುಗಳು ಮದುವೆ ನಿಲ್ಲಿಸುವುದು ಬೇಡ ಎಂದು ವರನ ಪೋಷಕರಿಗೆ ಧೈರ್ಯ ಹೇಳಿ ಬೇರೆ ಯುವತಿ ಹುಡುಕಾಟ ನಡೆಸಿದ್ದಾರೆ. ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದ ಯುವತಿ ಮತ್ತು ಆಕೆಯ ತಂದೆ ತಾಯಿಗೆ ನಡೆದ ಘಟನೆಯ ಬಗ್ಗೆ ಮನವರಿಕೆ ಮಾಡಿಕೊಟ್ಟು ಅವರ ಒಪ್ಪಿಗೆ ಪಡೆದು ಸೋಮವಾರ ನಿಗದಿಯಾಗಿದ್ದ ಮುಹೂರ್ತದಲ್ಲಿಯೇ ಮದುವೆ ನೆರವೇರಿಸಲಾಗಿದೆ.