ಡೆಹ್ರಾಡೂನ್: ನಾಗರಸು ಗುರುದ್ವಾರಕ್ಕೆ ಶಸ್ತ್ರಸಜ್ಜಿತ ನಿಹಾಂಗ್ಗಳ ಗುಂಪೊಂದು ದಾಳಿ ನಡೆಸಿ, ಅಲ್ಲಿದ್ದ ವೃದ್ಧ ಭಕ್ತರೊಬ್ಬರನ್ನು ಒತ್ತೆಯಾಳಾಗಿರಿಸಿಕೊಂಡಿರುವ ಘಟನೆ ಉತ್ತರಾಖಂಡದ ರುದ್ರಪ್ರಯಾಗದಲ್ಲಿ ನಡೆದಿದೆ.
ಬಂಧಿತ ಸಹಚರರ ಬಿಡುಗಡೆ ಹಾಗೂ ಗುರುದ್ವಾರದಲ್ಲಿ ವಾಸ್ತವ್ಯಕ್ಕೆ ಕೊಠಡಿಗಳ ನೀಡುವಂತೆ ಒತ್ತಾಯಿಸಿ ಭಕ್ತರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಈಟಿ, ಕತ್ತಿ, ಕೊಡಲಿಗಳೊಂದಿಗೆ ನುಗ್ಗಿದ ಆರು ಜನರ ಶಸ್ತ್ರಸಜ್ಜಿತ ನಿಹಾಂಗ್ ಸಿಖ್ಖರ ಗುಂಪೊಂದು, ವೃದ್ಧ ಸಿಖ್ ಭಕ್ತರೊಬ್ಬರನ್ನು ಮೂರನೇ ಮಹಡಿಯ ಛಾವಣಿ ಮೇಲೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ.
ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗರ್ವಾಲ್ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನಿಹಾರಿಕಾ ತೋಮರ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಆರು ಜನ ನಿಹಾಂಗ್ಗಳು ಗುರುದ್ವಾದ ಟೆರೇಸ್ಗೆ ಹೋಗುವ ಮೂರನೇ ಮಹಡಿಯ ಪ್ರವೇಶದ್ವಾರಕ್ಕೆ ಒಳಗಿನಿಂದ ಬೀಗ ಹಾಕಿಕೊಂಡು ಇಡೀ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಅಥವಾ ಕಾರ್ಯಾಚರಣೆ ನಡೆಸದಂತೆ ನಿಹಾಂಗ್ಗಳು ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ವೃದ್ಧ ಭಕ್ತನನ್ನು ಜೊತೆಯಲ್ಲೇ ಇಟ್ಟುಕೊಂಡು ಛಾವಣಿ ಮೇಲಿಂದ ಘೋಷಣೆಗಳನ್ನು ಕೂಗಿದ್ದಾರೆ.
ಬದರಿನಾಥ ಹೆದ್ದಾರಿಯಲ್ಲಿರುವ ಈ ನಾಗರಸು ಗುರುದ್ವಾರವು ಹೇಮಕುಂಡ್ ಸಾಹಿಬ್ಗೆ ಹೋಗಿ ಬರುವ ಸಿಖ್ ಯಾತ್ರಿಕರಿಗೆ ಆಶ್ರಯ ನೀಡುವ ಪ್ರಮುಖ ಕೇಂದ್ರವಾಗಿದೆ. ಸದ್ಯ ಪೊಲೀಸರು ನಿಹಾಂಗ್ಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಒತ್ತೆಯಾಳನ್ನು ಬಿಡುಗಡೆ ಮಾಡಿದರೆ ಅವರನ್ನು ಪಂಜಾಬ್ಗೆ ಸುರಕ್ಷಿತವಾಗಿ ಹಿಂತಿರುಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನಿಹಾಂಗಿಗಳು ಅಧಿಕಾಅರಿಗಳ ಮಾತುಗಳನ್ನು ಒಪ್ಪುತ್ತಿಲ್ಲ. ಸ್ಥಳದಲ್ಲಿ ಆತಂಕದ ವಾತಾವರಣ ಮುಂದುವರೆದಿದೆ.
ಪಂಜಾಬ್ನ ಮೊಹಾಲಿಯಿಂದ ಬಂದ ನಿಹಾಂಗ್ ಗುಂಪು, ತಮ್ಮ ಪ್ರತಿಭಟನಾಕಾರರಿಗಾಗಿ ಗುರುದ್ವಾರದಲ್ಲಿ ತಂಗಲು 50-60 ಕೊಠಡಿಗಳನ್ನು ನೀಡುವಂತೆ ಮ್ಯಾನೇಜ್ಮೆಂಟ್ಗೆ ಒತ್ತಾಯಿಸಿದೆ. ಆದರೆ, ಗುರುದ್ವಾರದ ವ್ಯವಸ್ಥಾಪಕ ಬಿಯಾಂತ್ ಸಿಂಗ್ ಅವರು ಅಷ್ಟು ಕೊಠಡಿಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದಾಗ ನಿಹಾಂಗ್ಗಳು ಹಿಂಸಾಚಾರಕ್ಕೆ ಇಳಿದಿದ್ದಾರೆ.
ಜೂನ್ 16 ರಂದು ಚಮೋಲಿಯ ಕರ್ಣಪ್ರಯಾಗ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ ವಿಚಾರವಾಗಿ ಸ್ಥಳೀಯರು ಮತ್ತು ನಿಹಾಂಗ್ ಯಾತ್ರಿಕರ ನಡುವೆ ಭೀಕರ ತಲವಾರ್ ದಾಳಿ ನಡೆದಿತ್ತು. ನಾಲ್ವರು ಸ್ಥಳೀಯರು ಗಾಯಗೊಂಡಿದ್ದ ಈ ಘಟನೆಯಲ್ಲಿ ಪೊಲೀಸರು ಪಂಜಾಬ್ನ ನಾಲ್ವರು ನಿಹಾಂಗ್ಗಳನ್ನು ಬಂಧಿಸಿದ್ದರು. ಈಗ ಈ ನಾಲ್ವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ಒತ್ತೆಯಾಳು ಸಂಚು ರೂಪಿಸಿದ್ದಾರೆ ಎನ್ನಆಗಿದೆ.