ಬಳ್ಳಾರಿ ಜಿಲ್ಲೆಯ ಕುರುಗೋಡುನ ಕುಡಿತಿನಿ ಪಟ್ಟಣ ಸಮೀಪ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯ ವೇಳೆ ಕಾಂಕ್ರೀಟ್ ಲಿಫ್ಟ್ ಬಕೆಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ತಿಮ್ಮಲಾಪುರ ಗ್ರಾಮದ ಹೆಚ್. ಹುಲಿಯಪ್ಪ(27), ಗೆಣಿಕೆಹಾಳ ಗ್ರಾಮದ ಎ.ಕೆ. ನೀಲಪ್ಪ(35) ಮೃತಪಟ್ಟವರು.
ಕುಡಿತಿನಿಯ HLC ಕಾಲೋನಿಯ ಸಮೀಪ ಹೊಸದಾಗಿ ಓವರ್ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿಯ ಮರಳು, ಸಿಮೆಂಟ್ ಇತರೆ ನಿರ್ಮಾಣ ಸಾಮಗ್ರಿಗಳನ್ನು ಲಿಫ್ಟ್ ಮೂಲಕ ಮೇಲೆ ಸಾಗಿಸುತ್ತಿದ್ದರು. ಕಾಂಕ್ರೀಟ್ ಲಿಫ್ಟ್ ಬಕೆಟ್ ವೈರ್ ತುಂಡಾಗಿ 60 ಅಡಿ ಎತ್ತರದಿಂದ ಹುಲಿಯಪ್ಪ, ನೀಲಪ್ಪ ಕೆಳಗೆ ಬಿದ್ದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಬಸವರಾಜ್ ಮತ್ತು ಸೂಪರ್ ವೈಸರ್ ಖಾದರ್ ಬಾಷಾ ಅವರು ಕಾರ್ಮಿಕರಿಗೆ ಮುಂಜಾಗ್ರತೆ ಕ್ರಮವಾಗಿ ಸುರಕ್ಷತಾ ಸಾಧನ ನೀಡದೆ ನಿರ್ಲಕ್ಷ್ಯದಿಂದ ಕೆಲಸ ಮಾಡಿಸಿಕೊಂಡಿದ್ದು, ಇದರಿಂದಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಗುತ್ತಿಗೆದಾರ ಮತ್ತು ಸೂಪರ್ ವೈಸರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಡಿತಿನಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕುಡಿತಿನಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.