ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಗೆ ಮುಂದಾದ ಬೆನ್ನಲ್ಲೇ ಇದೀಗ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶುಕ್ರವಾರ ನಡೆದ ಗ್ಯಾರಂಟಿ ಪರಿಶೀಲನಾ ಸಭೆಯಲ್ಲಿ ಈ ಕುರಿತಾಗಿ ಶಿಫಾರಸು ಮಾಡಲಾಗಿದೆ. ನಷ್ಟ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವೆಂದು ಮುಖ್ಯಮಂತ್ರಿಗಳಿಗೆ ಗ್ಯಾರಂಟಿ ಸಮಿತಿ ಮನವಿ ಮಾಡಿದೆ. ಶಕ್ತಿ ಯೋಜನೆಯಿಂದಾಗಿ ರಾಜ್ಯ ಸಾರಿಗೆ ಇಲಾಖೆಗೆ 5173 ಕೋಟಿ ರೂ. ಕೊರತೆ ಉಂಟಾಗಿದೆ. ಈ ಕೊರತೆ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸಾರಿಗೆ ನಿಗಮ ಸರ್ಕಾರವನ್ನು ಒತ್ತಾಯಿಸಿದೆ.
ಇದರೊಂದಿಗೆ ಸಿಬ್ಬಂದಿ ಬಾಕಿ ವೇತನ ಪಾವತಿಗೆ 1271 ಕೋಟಿ ರೂಪಾಯಿ ಅಗತ್ಯವಿದೆ. ಇದರಲ್ಲಿ 450 ಕೋಟಿ ರೂ. ಬಿಡುಗಡೆಯಾಗಿದ್ದು, ಡೀಸೆಲ್ ದರ ಮತ್ತು ಸಿಬ್ಬಂದಿಯ ವೆಚ್ಚ ಹೆಚ್ಚಳವಾಗಿದೆ. 2025ರ ಜನವರಿ 5 ರಂದು ಪ್ರಯಾಣದರ ಹೆಚ್ಚಳ ಮಾಡಿದ್ದು, ನಂತರದಲ್ಲಿ ಪ್ರಯಾಣದರ ಹೆಚ್ಚಳ ಮಾಡಿಲ್ಲ. ಶಕ್ತಿ ಯೋಜನೆಯಡಿ ಮೇ ಅಂತ್ಯದವರೆಗೆ 763 ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. 2026 -27 ನೇ ಸಾಲಿಗೆ 10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಅಂದಾಜಿಸಲಾಗಿದೆ ಎಂದು ಹೇಳಲಾಗಿದೆ.