ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಗರಂ ಆಗಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಬುಲಾವ್ ನೀಡಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಿದ್ದ ವಿಪಕ್ಷಗಳ ಶಾಸಕರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೈಕೊಟ್ಟಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರು ಪಕ್ಷಕ್ಕೆ ಕೈಕೊಟ್ಟಿದ್ದು, 11 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಹಾಕಿದ್ದಾರೆ. ಇದು, ದೋಸ್ತಿಗಳಿಗೆ ಮುಖಭಂಗವಾಗುವಂತೆ ಮಾಡಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಶಾಸಕರ ಅಡ್ಡಮತದಾನವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಕರೆ ನೀಡಿದೆ. ಅಡ್ಡಮತದಾನದಿಂದ ನಾಯಕತ್ವದ ಮೇಲೆ ಅಸಮಾಧಾನಗೊಂಡಿರುವ ಹೈಕಮಾಂಡ್ ಈ ಬಗ್ಗೆ ಚರ್ಚಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅವರಿಗೆ ದೆಹಲಿಗೆ ಬರುವಂತೆ ತಿಳಿಸಿದೆ.
ಕಾಂಗ್ರೆಸ್ ಬೆಂಬಲಿಸಿದವರಿಗೆ ಮುಂದಿನ ಚುನಾವಣೆಗೆ ಟಿಕೆಟ್, ಬಿಜೆಪಿ-ಜೆಡಿಎಸ್ ಶಾಸಕರ ಅಭಿವೃದ್ಧಿಗೆ ಅನುದಾನದ ಭರವಸೆ ಕೊಟ್ಟಿರೋ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಕೇಸರಿ-ದಳ ಶಾಸಕರಿಗೆ ಸಕಲ ರೀತಿಯಲ್ಲಿ ಸಹಾಯ ಹಸ್ತ ಭರವಸೆ ಕಾರಣಕ್ಕೆ ಕ್ರಾಸ್ ವೋಟಿಂಗ್ ಆಗಿರೋದಾಗಿ ತಿಳಿದುಬಂದಿದೆ.
ವಿಧಾನ ಪರಿಷತ್ ಕದನದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ರಾಜ್ಯ ಕಾಂಗ್ರೆಸ್ನೊಳಗೆ ಆತಂರಿಕ ಕಲಹ, ಅಧಿಕಾರಕ್ಕೆ ಕಿತ್ತಾಟ ಎಂದು ಸದಾಕಾಲ ವಾಗ್ದಾಳಿ ನಡೆಸುತ್ತಿದ್ದ ವಿಪಕ್ಷಗಳಲ್ಲೇ ಇದೀಗ ದೊಡ್ಡ ಬಿರುಕು ಇರೋದು ಬಯಲಾಗಿದೆ. ಮೈತ್ರಿಯೊಳಗಿನ ಅಸಮಾಧಾನ, ಗೊಂದಲದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.