ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಕಾರಣ ನನ್ನ ಪಕ್ಷ ನಿಷ್ಠೆ ಹೊರತು ಬಿಜೆಪಿಗೆ ಕಮ್ ಬ್ಯಾಕ್ ಆಗಬೇಕು ಎಂಬ ಕಾರಣಕ್ಕೆ ಅಲ್ಲ. ಬಿಜೆಪಿಯವರು ನನ್ನನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೂ ನನಗೆ ಚಿಂತೆ ಇಲ್ಲ ಎಂದು ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿಗೆ ನಾನು ಕಬ್ ಬ್ಯಾಕ್ ಮಾಡಲು ಮತ ಹಾಕಿಲ್ಲ. ನನ್ನ ರಾಜಕೀಯ ಸ್ಟ್ಯಾಂಡ್ ಗಟ್ಟಿಯಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಭ್ರಷ್ಟ ಕುಟುಂಬ ರಾಜಕಾರಣ ನಡೆಯುತ್ತಿದೆ. ಅದು ಕೊನೆಗೊಳ್ಳುವವರೆಗೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆಯೂ ನಾನು ಪಕ್ಷ ನಿಷ್ಠೆ ತೋರಿದ್ದೆ. ಈಗಲೂ ನಾನು ಪಕ್ಷ ನಿಷ್ಠೆಯನ್ನು ಅನುಸರಿಸುತ್ತೇನೆ ಎಂದರು.
ರಾಜಕೀಯದಲ್ಲಿ ತಮ್ಮ ನಿಲುವು ದೃಢವಾಗಿದೆ ಎಂದು ಹೇಳಿದ ಅವರು, ಹಿಂದೊಮ್ಮೆ ಎಂಎಲ್ಸಿ ಆಗಿದ್ದಾಗ ನಡೆದ ಘಟನೆಯನ್ನು ಯತ್ನಾಳ್ ನೆನಪಿಸಿಕೊಂಡಿದ್ದು, ಶಂಕರ್ ಮೂರ್ತಿ ವಿರುದ್ಧ ಉಗ್ರಪ್ಪನವರು ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಂ.ಬಿ. ಪಾಟೀಲ್ ಅವರು ತಮ್ಮನ್ನು ಭೇಟಿ ಮಾಡಿದ್ದರು. ಸಿಂದಗಿ ಅಥವಾ ದೇವರಿಪ್ಪಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಹಾಗೂ ಸಾಕಷ್ಟು ಅಭಿವೃದ್ಧಿ ಹಣ ನೀಡುವುದಾಗಿ ಆಮಿಷವೊಡ್ಡಿ, ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ಕೇಳಿದ್ದರು. ಆದರೆ, ತಾವು ಬಿಜೆಪಿ ಚಿಹ್ನೆಯಿಂದ ಆಯ್ಕೆಯಾಗಿದ್ದು, ತಮ್ಮ ನಿಷ್ಠೆ ಬಿಜೆಪಿಗೆ ಮಾತ್ರ ಎಂದು ಸ್ಪಷ್ಟಪಡಿಸಿ ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದೆ. ಆ ಮತದಿಂದಾಗಿಯೇ ಡಿ.ಎಸ್. ಶಂಕರ್ ಮೂರ್ತಿ ಸಭಾಪತಿಯಾಗಿ ಮುಂದುವರೆಯಲು ಸಾಧ್ಯವಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.