ಬೆಂಗಳೂರು: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ತೀವ್ರ ಸಂಚಲನ ಮೂಡಿಸಿದೆ.
ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ. ಸೋಮಶೇಖರ್, ಮುಖ್ಯಮಂತ್ರಿಗಳ ಮನವಿ ಮೇರೆಗೆ ಕಾಂಗ್ರೆಸ್ಗೆ ಆತ್ಮಸಾಕ್ಷಿ ಮತ ಚಲಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಶಿವರಾಮ್ ಹೆಬ್ಬಾರ್ ಆತ್ಮಸಾಕ್ಷಿಯಂತೆ ಮತದಾನ ಮಾಡಿದ್ದೇನೆ ಎಂದಿದ್ದಾರೆ. ಮತ್ತೊಂದೆಡೆ, ಜೆಡಿಎಸ್ ಹಿರಿಯ ಶಾಸಕ ಜಿ,ಟಿ,ದೇವೇಗೌಡ ಮತದಾನ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು, ಜಿ.ಟಿ. ದೇವೇಗೌಡರು ತಮಗೇ ಮತ ಹಾಕಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಶಾಸಕರು ಕೂಡ ರೆಸಾರ್ಟ್ ಗೆ ಶಿಫ್ಟ್ ಆಗಿದ್ದರು. ಆದರೆ ಜಿ.ಟಿ.ದೇವೇಗೌಡ ಮಾತ್ರ ರೆಸಾರ್ಟ್ ಗೆ ಹೋಗದೇ ಅಂತರ ಕಾಯ್ದುಕೊಂಡಿದ್ದರು. ಇಂದು ನೇರವಾಗಿ ವಿಧಾನಸೌಧಕ್ಕೆ ಪ್ರತ್ಯೇಕವಾಗಿ ಬಂದು ಪರಿಷತ್ ಚುನಾವಣೆಗೆ ಮತಚಲಾಯಿಸಿ ತೆರಳಿದ್ದಾರೆ. ಇದರಿಂದಾಗಿ ಜಿ.ಟಿ.ದೇವೆಗೌಡರ ಮತದಾನ ತೀವ್ರ ಕುತೂಹಲ ಮೂದಿಸಿದೆ.
ಅತ್ತ ಜೆಡಿಎಸ್ ಕ್ಯಾಂಪ್ನಲ್ಲಿ ಭಿನ್ನಮತ ಹೊಗೆಯಾಡುತ್ತಿರುವ ಸುದ್ದಿಗಳ ನಡುವೆಯೇ ಜೆಡಿಎಸ್ ಅಭ್ಯರ್ಥಿ ಕೆ.ಎನ್. ಗೋವಿಂದರಾಜು ಅವರು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಶಾಸಕ ಜಿ.ಟಿ. ದೇವೇಗೌಡರು ನನ್ನ ಪರವಾಗಿಯೇ ಮತ ಚಲಾಯಿಸಿದ್ದಾರೆ. ತಾಯಿ ಚಾಮುಂಡೇಶ್ವರಿಯೇ ಜಿಟಿಡಿಯವರನ್ನು ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಮೊದಲ ಪ್ರಾಶಸ್ತ್ಯದ ಮತ ನಮಗೇ ಸಿಕ್ಕಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದು ಕುಟುಂಬದ ತರಹ ಒಟ್ಟಾಗಿದ್ದೇವೆ. ಈ ಚುನಾವಣೆಯನ್ನು ನಾವು ಯಾವುದೇ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ಆದರೆ ಇವತ್ತು ಏನೆಲ್ಲಾ ರಾಜಕೀಯ ಸರ್ಕಸ್ ನಡೆಯುತ್ತಿದೆಯೋ, ಇದೆಲ್ಲದಕ್ಕೂ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಧೋರಣೆಯೇ ಕಾರಣ ಎಂದು ಗೋವಿಂದರಾಜು ಟೀಕಿಸಿದ್ದಾರೆ.
ಸೋಮಶೇಖರ್ ಮತ್ತು ಹೆಬ್ಬಾರ್ ಅವರ ಅಡ್ಡಮತದಾನದಿಂದ ಕಾಂಗ್ರೆಸ್ ಪಾಳಯದಲ್ಲಿ ಗೆಲುವಿನ ಉತ್ಸಾಹ ಕಾಣುತ್ತಿದ್ದು, ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ಉಂಟಾಗುವ ಲಕ್ಷಣಗಳು ದಟ್ಟವಾಗಿವೆ.