ಧರ್ಮಸ್ಥಳದಲ್ಲಿ ಮಹಿಳೆಯರ ಅನುಮಾನಾಸ್ಪದ ಸಾವುಗಳು ಸಂಭವಿಸಿವೆ, ಸಂತ್ರಸ್ತರ ಹೆಣಗಳನ್ನು ನಾನೇ ಹೂತುಹಾಕಿದ್ದೇನೆ ಎಂದು ಸ್ಪೋಟಕ ಹೇಳಿಕೆ ನೀಡಿ, ಹೂತಿಟ್ಟ ಸ್ಥಳಗಳನ್ನು ತೋರಿಸುವುದಾಗಿ ದೂರು ನೀಡಿ ರಾಜ್ಯ ಸರ್ಕಾರ ಎಸ್ಐಟಿ ರಚಿಸುವಂತೆ ಮಾಡಿದ್ದ ಧರ್ಮಸ್ಥಳದ ಮಾಜಿ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ಬಳಿಕ ವಿಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಸದ್ಯ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ.
ಮೊದಲಿಗೆ ಚಿನ್ನಯ್ಯ ಗುರುತಿಸಿದ 16 ಸ್ಥಳಗಳ ಪೈಕಿ ಎಲ್ಲಿಯೂ ಅಸ್ತಿಪಂಜರದ ಯಾವ ಕುರುಹುಗಳೂ ಸಹ ಪತ್ತೆಯಾಗದ ಕಾರಣ ಜನರ ಕೆಂಗಣ್ಣಿಗೆ ಗುರಿಯಾದ ಚಿನ್ನಯ್ಯ ಬಳಿಕ ತನಗೂ ಈ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ, ಎಲ್ಲವೂ ಗಿರೀಶ್ ಮಟ್ಟಣ್ಣವರ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಅವರ ಷಡ್ಯಂತ್ರ ಎಂದು ಆರೋಪಿಸಿದ.
ಇದೇ ಸಮಯಕ್ಕೆ ಗಿರೀಶ್ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ತಮ್ಮನ್ನು ಚಿನ್ನಯ್ಯ ಭೇಟಿಯಾದಾಗ ಹೂತಿಟ್ಟ ಹೆಣಗಳ ಬಗ್ಗೆ ನೀಡಿದ್ದ ಹೇಳಿಕೆಗಳ ವಿಡಿಯೊಗಳನ್ನು ಬಿಡುಗಡೆ ಮಾಡಿ ಚಿನ್ನಯ್ಯ ಉಲ್ಟಾ ಹೊಡೆದಿದ್ದಾನೆ ಎಂದು ತಿರುಗೇಟು ಕೊಟ್ಟರು.
ಹೀಗೆ ತಾನು ನೀಡಿದ್ದ ದೂರಿನ ವಿರುದ್ಧವೇ ಉಲ್ಟಾ ಹೊಡೆದ ಚಿನ್ನಯ್ಯ ಇತ್ತೀಚೆಗಷ್ಟೆ ಆದಷ್ಟು ಬೇಗ ಎಸ್ಐಟಿ ವರದಿ ಬಹಿರಂಗಪಡಿಸಬೇಕು ಎಂದು ನ್ಯಾಯಲಯಕ್ಕೆ ಮನವಿ ಮಾಡಿಕೊಂಡಿದ್ದ. ಅಲ್ಲದೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದ್ದು, ಗಿರೀಶ್ ಮಟ್ಟಣ್ಣವರ್ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಕೊಟ್ಟಿದ್ದರು, ಪ್ರಕಾಶ್ ರಾಜ್ ನೀನು ಈ ರೀತಿ ಹೇಳಿಕೆ ಕೊಟ್ಟರೆ ನಾನು ಬಂದು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದರು ಎಂದು ಬಾಂಬ್ ಸಿಡಿಸಿದ್ದ.
ಚಿನ್ನಯ್ಯನ ಈ ಹೇಳಿಕೆ ಭಾರೀ ಚರ್ಚೆಯನ್ನು ಹುಟ್ಟುಹಾಕಿತು. ಈ ಆರೋಪಕ್ಕೆ ಉತ್ತರ ನೀಡಲು ಮುಂದಾದ ಪ್ರಕಾಶ್ ರಾಜ್ ನಿನ್ನೆ ( ಜೂನ್ 17 ) ಪತ್ರಿಕಾಗೋಷ್ಟಿಯನ್ನು ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಸಿದರು. ಈ ಪತ್ರಿಕಾಗೋಷ್ಟಿಗೆ ಎಕ್ಸ್ ಮೂಲಕ ಆಹ್ವಾನ ನೀಡಿದ್ದ ಪ್ರಕಾಶ್ ರಾಜ್ ಮಾರಿಕೊಂಡ ಮಾಧ್ಯಮಗಳೂ ಸಹ ಬನ್ನಿ ಎಂದು ಉಲ್ಲೇಖಿಸಿದ್ದರು.
ಈ ಸಾಲನ್ನು ಕಂಡು ರೊಚ್ಚಿಗೆದ್ದ ಕೆಲ ಮಾಧ್ಯಮಗಳು ಪತ್ರಿಕಾಗೋಷ್ಟಿ ವೇಳೆ ಪ್ರಕಾಶ್ ರಾಜ್ ವಿರುದ್ಧ ಕೆಂಡಕಾರಿದರು. ಪ್ರಕಾಶ್ ರಾಜ್ ಅವರಿಗೆ ಧರ್ಮಸ್ಥಳ ಪ್ರಕರಣ ಹಾಗೂ ಚಿನ್ನಯ್ಯನ ಆರೋಪದ ಬಗ್ಗೆ ಮಾತನಾಡಲು ಬಿಡದೇ ಮಾರಿಕೊಂಡ ಮಾಧ್ಯಮಗಳು, ಗೋಧಿ ಮೀಡಿಯಾ ಎಂದರೆ ಯಾರು ಹೇಳಿ ಎಂದು ಪಟ್ಟುಹಿಡಿದು ಕೂಗಾಡಿದರು. ಇದೆಲ್ಲದ್ದಕ್ಕೂ ತಾಳ್ಮೆಯಿಂದಲೇ ಉತ್ತರ ನೀಡಿದ ಪ್ರಕಾಶ್ ರಾಜ್ ಅದಕ್ಕೆ ಉತ್ತರ ನನಗೆ ಹಾಗೂ ನಿಮಗೂ ಸಹ ಗೊತ್ತಿದೆ ಎಂದರು.
ಅಲ್ಲದೇ ನಾನು ಮಾಧ್ಯಮ ಮಿತ್ರರು ಹಾಗೂ ಮಾರಿಕೊಂಡ ಮಾಧ್ಯಮ ಎಂದು ಇಬ್ಬರಿಗೂ ಆಹ್ವಾನ ನೀಡಿದ್ದೇನೆ, ನೀವು ಮಾರಿಕೊಳ್ಳದ ಮಾಧ್ಯಮಗಳಾ? ಅಥವಾ ಮಾರಿಕೊಂಡ ಮಾಧ್ಯಮಗಳಾ? ಎಂದು ಮತ್ತೆ ಕೌಂಟರ್ ಕೊಟ್ಟರು.
ಆದರೂ ಕೆಲ ಪತ್ರಕರ್ತರು ಮತ್ತೆ ತಮ್ಮದೇ ಪ್ರಶ್ನೆಯನ್ನು ಮುಂದುವರಿಸಿದಾಗ ಪ್ರಕಾಶ್ ರಾಜ್ ‘ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತೀರ? ನಿಮ್ಮಲ್ಲಿ ಕುಂಬಳಕಾಯಿ ಕಳ್ಳ ಯಾರು? ನೀವಾ? ನೀವಾ?’ ಎಂದು ಪದೇ ಪದೇ ಪ್ರಶ್ನಿಸಿದವರಿಗೆಲ್ಲ ಕೈ ತೋರಿಸಿ ಪ್ರಶ್ನಿಸಿ ಇನ್ನಷ್ಟು ಕಿಚಾಯಿಸಿದರು.