ನವದೆಹಲಿ: ಆರ್.ಎಸ್.ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ವಿವರ ಕೇಳಿರುವ ವಿಚಾರ ಇದೀಗ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಆರ್.ಎಸ್.ಎಸ್ನ ನೋಂದಣಿ, ಆದಾಯ, ಆಸ್ತಿಪಾಸ್ತಿ ಸೇರಿದಂತೆ ಇತರೆ ವಿವರ ನೀಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಅವರ ಪ್ರಶ್ನೆಗಳಿಗೆ ಆರ್.ಎಸ್.ಎಸ್ನವರು ಕಾನೂನಾತ್ಮಕವಾಗಿ ಉತ್ತರಿಸ್ತಾರೆ. ಸಂಘ ಸಂಸ್ಥೆ ಸ್ಥಾಪಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಕೇವಲ ಆರ್.ಎಸ್.ಎಸ್ಗೆ ಮಾತ್ರ ಅವಕಾಶ ನೀಡಿಲ್ಲ. ಗ್ರಾಮೀಣ ಭಾಗದ ನಾಲ್ವರು ಯುವಕರು ಸೇರಿ ಸಂಘ ಕಟ್ಟಬಹುದು. ಸಂವಿಧಾನ ಇಲ್ಲದಾಗಲೂ, ಬ್ರಿಟಿಷರ ಕಾಲದಲ್ಲೂ ಕೆಲಸ ಮಾಡಿದೆ ಎಂದಿದ್ದಾರೆ.
ಸಂಘದ ಆಸ್ತಿ, ವಹಿವಾಟುಗಳು ನಿಯಮಗಳ ಅಡಿಯಲ್ಲಿ ನಡೆಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಇದೇ ಮೊದಲ ಅಲ್ಲ ಆಡಿಟ್ ಕೇಳ್ತಿರೋದು. ಐಟಿ-ಬಿಟಿ ಇಲಾಖೆಯಲ್ಲಿ ರಿಸರ್ಚ್ ಇನೋವೇಷನ್ ಮಾಡಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಇಲ್ಲಿ ರಿಸರ್ಚ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾನೇ ಮೊದಲು ನೋಂದಣಿ ಕೇಳುತ್ತಿದ್ದೇನೆ ಅಂದುಕೊಂಡರೆ ಅದು ತಪ್ಪು. ಈ ಹಿಂದೆ ಪಥಸಂಚಲನಕ್ಕೆ ವಿರೋಧಿಸಿದರು, ಕೋರ್ಟ್ ಅನುಮತಿ ನೀಡಿತು. ಪಥ ಸಂಚಲನಕ್ಕೆ ಮೊದಲು 500 ಜನ ಸೇರುವ ಜಾಗದಲ್ಲಿ ವಿರೋಧದ ಬಳಿಕ 5000 ಜನ ಸೇರಿದರು. ವಿರೋಧಿಸಿದಷ್ಟು ಅದರ ಚಿಂತನೆಗಳು ಬಲಿಷ್ಠವಾಗುತ್ತವೆ, ಇದಕ್ಕೆ ಸ್ವಾಗತಿಸುತ್ತೇನೆ ಎಂದರು.
ದೇಶದ ಸಂವಿಧಾನದ ಅಡಿಯಲ್ಲಿ ಆರ್.ಎಸ್.ಎಸ್ ಕೆಲಸ ಮಾಡುತ್ತಿದೆ. ಸಂವಿಧಾನದ ಮೇಲೆ ಎಂದು ಕೆಲಸ ಮಾಡುವ ಜನರು, ಸಂಘಟನೆ ಮಾಡುವವರು ಯಾರು ಎಂದು ಗೊತ್ತಿದೆ, ನೋಂದಣಿ ಬಗ್ಗೆ ಚರ್ಚೆ ಆಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಾನೂನು ಸಲಹೆ ಪಡೆಯಬೇಕಿತ್ತು. ಇದಕ್ಕೆ ಆರ್.ಎಸ್.ಎಸ್ ಮತ್ತು ಜನರು ಮುಂದೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.