ಕಾರವಾರ: ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ರೀಲ್ಸ್ ಮಾಡಲು ಸಮುದ್ರಕ್ಕೆ ಇಳಿದಾಗ ದುರಂತ ಸಂಭವಿಸಿದ್ದು, ಯುವಕನೋರ್ವ ಸಮುದ್ರಪಾಲಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ(26) ನೀರುಪಾಲಾದ ಯುವಕ. ಕರಾವಳಿ ಕಾವಲುಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.
ಜೀವನ್ ಭಟ್ಟರಾಯಿ ತನ್ನ ಐವರು ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ. ಖಾಸಗಿ ರೆಸಾರ್ಟ್ನಲ್ಲಿ ಮೂರು ದಿನದಿಂದ ತಂಗಿದ್ದರು. ರೀಲ್ಸ್ ಮಾಡಲು ಸ್ನೇಹಿತರು ಸಮುದ್ರಕ್ಕಿಳಿದಿದ್ದಾರೆ. ರೀಲ್ಸ್ ಮಾಡಿ ಸ್ನೇಹಿತರು ಹಿಂತಿರುಗಿದ್ದಾರೆ. ಆದರೆ ಜೀವನ್ ಸಮುದ್ರದಲ್ಲಿ ಆಟವಾಡುತ್ತಿದ್ದ. ಆತ ಬರುತ್ತಾನೆ ಎಂದು ಸ್ನೇಹಿತರು ಮುಂದೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಜೀವನ್ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಪಿಎಸ್ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.