ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುಪ್ರಚಾರಿತ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಲ್ಲಿ ಭಾರಿ ಪ್ರಮಾಣದ ಗೋಲ್ಮಾಲ್ ನಡೆದಿದೆಯಾ? ಜನರ ತೆರಿಗೆ ಹಣ ರಾಜಾರೋಷವಾಗಿ ಲೂಟಿಯಾಗುತ್ತಿದೆಯಾ? ಇಂತಹದ್ದೊಂದು ಆತಂಕಕಾರಿ ಹಾಗೂ ಶಾಕಿಂಗ್ ವಿಷಯವನ್ನು ಈಗ ದೇಶದ ಅತ್ಯುನ್ನತ ತನಿಖಾ ಆಡಿಟ್ ಸಂಸ್ಥೆಯಾದ ಸಿಎಜಿ (CAG) ವರದಿ ಬಹಿರಂಗಪಡಿಸಿದೆ
ಸಿಎಜಿ ವರದಿಯನ್ನು ಅಸ್ತ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi), “ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಲೂಟಿಗೆ ಸ್ಪಷ್ಟ ನಿದರ್ಶನ” ಎಂದು ಭಾರಿ ಕಿಡಿ ಕಾರಿದ್ದಾರೆ.
ಒಂದೇ ಅಕೌಂಟ್ಗೆ ಕೋಟಿ ಕೋಟಿ ಜಮೆ ಏನಿದೆ ಸಿಎಜಿ ವರದಿಯಲ್ಲಿ?
ಬಿಜೆಪಿ ಐಟಿ ಸೆಲ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿಎಜಿ ವರದಿಯ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ:
19,020 ಜನರಿಗೆ ಒಂದೇ ಅಕೌಂಟ್?: ಗೃಹಲಕ್ಷ್ಮಿ ಯೋಜನೆಯ ಬರೋಬ್ಬರಿ 19,020 ಫಲಾನುಭವಿಗಳಿಗೆ ಕೇವಲ ಒಂದೇ ಒಂದು ಬ್ಯಾಂಕ್ ಖಾತೆಯನ್ನು ಜೋಡಿಸಿ, ಜಂಟಿಯಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದೆ “ಡಿಕೆ ಶಿವಕುಮಾರ್ ಅವರೇ, ಇಷ್ಟೊಂದು ಜನರಿಗೆ ಒಂದೇ ಅಕೌಂಟ್ನಿಂದ ಹಣ ಜಮೆಯಾಗಲು ಹೇಗೆ ಸಾಧ್ಯ? ಆ ಹಣ ನಿಜವಾದ ಮಹಿಳೆಯರ ಕೈ ಸೇರಿದೆಯೋ ಅಥವಾ ಬೇರೆಯವರ ಪಾಲಾಗಿದೆಯೋ?” ಎಂದು ಬಿಜೆಪಿ ಪ್ರಶ್ನಿಸಿದೆ.
ವಿವರಗಳೇ ಇಲ್ಲದ ಖಾತೆಗಳಿಗೆ ₹46.52 ಕೋಟಿ ಪಾವತಿ: ಬ್ಯಾಂಕ್ ಖಾತೆಯ ಕನಿಷ್ಠ ಮೂಲಭೂತ ವಿವರಗಳೇ ಇಲ್ಲದ 23,262 ಖಾತೆಗಳಿಗೆ ರೂ. 46.52 ಕೋಟಿಗೂ ಅಧಿಕ ಹಣವನ್ನು ನಿಯಮಬಾಹಿರವಾಗಿ ಜಮೆ ಮಾಡಲಾಗಿದೆ ಎಂದು ಸಿಎಜಿ ವರದಿ ಬೆರಳು ಮಾಡಿ ತೋರಿಸಿದೆ.
ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿ – ಪ್ರಲ್ಹಾದ ಜೋಶಿ ಆಕ್ರೋಶ
“ಕಾಂಗ್ರೆಸ್ ಸರ್ಕಾರ ಯಾವುದೇ ನೀತಿ-ನಿಯಮಗಳನ್ನು ಸರಿಯಾಗಿ ರಚಿಸಿಕೊಳ್ಳದೇ ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಗ್ಯಾರಂಟಿಗಳನ್ನು ತಂದು ಇದೀಗ ಇಡೀ ರಾಜ್ಯವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಸಮರ್ಪಕ ಪರಿಶೀಲನೆ ನಡೆಸದೆ ಹಣ ಜಮೆ ಮಾಡಿರುವುದು ಭ್ರಷ್ಟಾಚಾರದ ಜ್ವಲಂತ ಸಾಕ್ಷಿ. ಇತ್ತ ಅರ್ಹ ಜನರಿಗೂ ಸರಿಯಾಗಿ ಹಣ ತಲುಪಿಸದೆ ಮಹಾ ವಂಚನೆ ಮಾಡಲಾಗುತ್ತಿದೆ” ಎಂದು ಪ್ರಲ್ಹಾದ ಜೋಶಿ ಹರಿಹಾಯ್ದಿದ್ದಾರೆ.
ನೀಟ್ (NEET) ಪರೀಕ್ಷೆ ವಂಚಿತ ವಿದ್ಯಾರ್ಥಿಗಳ ವಿಚಾರದಲ್ಲೂ ತೀವ್ರ ಬೇಜವಾಬ್ದಾರಿತನ
ಇದೇ ವೇಳೆ ಬೆಂಗಳೂರಿನಲ್ಲಿ ಭಾನುವಾರ ನಡೆದ ನೀಟ್ ಮರುಪರೀಕ್ಷೆಗೆ ಮೂವರು ವಿದ್ಯಾರ್ಥಿಗಳು ಟ್ರಾಫಿಕ್ ಜಾಮ್ನಿಂದಾಗಿ ಹಾಜರಾಗಲು ಸಾಧ್ಯವಾಗದ ಘಟನೆಗೂ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಜೋಶಿ ಆಪಾದಿಸಿದ್ದಾರೆ.
ಸರ್ಕಾರಿ ಬಸ್ಗಳ ದುರ್ಬಳಕೆ: ಸರ್ಕಾರದ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರು ತಮ್ಮ ಪಕ್ಷದ ಸಮಾವೇಶಕ್ಕೆ ಸರ್ಕಾರಿ ಬಸ್ಗಳನ್ನು ಬಳಸಿ ಇಡೀ ಬೆಂಗಳೂರಿನಲ್ಲಿ ಭಾರಿ ಸಂಚಾರ ದಟ್ಟಣೆ (Traffic Jam) ಸೃಷ್ಟಿಸಿದರು.
ವಿದ್ಯಾರ್ಥಿಗಳ ಮೇಲೆಯೇ ಗೂಬೆ: ದೇಶಾದ್ಯಂತ ಜೂನ್ 21ರಂದು ನೀಟ್ ಮರುಪರೀಕ್ಷೆ ಇದೆ ಎಂಬುದು ಗೊತ್ತಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದ ಸರ್ಕಾರ, ಈಗ ಪರೀಕ್ಷೆ ವಂಚಿತ ಅಮಾಯಕ ವಿದ್ಯಾರ್ಥಿಗಳನ್ನೇ ದೂಷಿಸುತ್ತಿರುವುದು ಅತ್ಯಂತ ಹೊಣೆಗೇಡಿತನ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.