ಬೆಂಗಳೂರು: ಕರ್ನಾಟಕದ ಕೈಗಾರಿಕಾ ಬೆಳವಣಿಗೆ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ₹7,506 ಕೋಟಿ ಹೂಡಿಕೆಯ 55 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 28 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಹೂಡಿಕೆ ಜಿಲ್ಲೆಗಳತ್ತ, ಉದ್ಯೋಗ ಯುವಜನತೆಯತ್ತ ಎನ್ನುವಂತೆ ವಿಜಯಪುರ, ಕೊಡಗು, ಬಳ್ಳಾರಿ, ಗದಗ, ದಕ್ಷಿಣ ಕನ್ನಡ, ತುಮಕೂರು, ಕೋಲಾರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೂಡಿಕೆಗೆ ಹಸಿರು ನಿಶಾನೆ ತೋರಲಾಗಿದೆ.
ರಾಜ್ಯದಾದ್ಯಂತ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಿ, ಉದ್ಯೋಗ ಸೃಷ್ಟಿಗೆ ವೇಗ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLSWCC) ಸಭೆ ನಡೆಸಿ, 55 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಲ್ಲಿ 41 ಯೋಜನೆಗಳು ಬೆಂಗಳೂರಿನಾಚೆಗೆ ಹೂಡಿಕೆ ಮಾಡಲಿವೆ. ಇದರಿಂದಾಗಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿವೆ.
ಪ್ರಮುಖ ಅಂಶಗಳು:
• ಒಟ್ಟು 55 ಹೊಸ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ.
• ₹7,506.62 ಕೋಟಿ ಬಂಡವಾಳ ಹೂಡಿಕೆಗೆ ಅವಕಾಶ.
• ಸುಮಾರು 28,022 ಹೊಸ ಉದ್ಯೋಗಾವಕಾಶಗಳ ಸೃಷ್ಟಿ.
• 55 ಯೋಜನೆಗಳ ಪೈಕಿ 41 ಯೋಜನೆಗಳು ‘ಬಿಯಾಂಡ್ ಬೆಂಗಳೂರು’ ಗುರಿಯಡಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ.
• ತೈವಾನ್, ಕೊರಿಯಾ, ಜರ್ಮನಿ ಹಾಗೂ ಜಪಾನ್ ಮೂಲದ 4 ವಿದೇಶಿ ಹೂಡಿಕೆ ಯೋಜನೆಗಳ ಮೂಲಕ ₹314.46 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.
ಪ್ರಮುಖ ಹೂಡಿಕೆ ಯೋಜನೆಗಳು:
* ಕೇನ್ಸ್ ಟೆಕ್ನಾಲಜಿ ಇಂಡಿಯಾ, ಮೈಸೂರು – ₹495 ಕೋಟಿ ಹೂಡಿಕೆ | 2,000 ಉದ್ಯೋಗಗಳು
* ಎಸ್ಎಫ್ಒ ಟೆಕ್ನಾಲಜೀಸ್, ಚಾಮರಾಜನಗರ – ₹490 ಕೋಟಿ ಹೂಡಿಕೆ | 2,500 ಉದ್ಯೋಗಗಳು
* ಟೆರ್ರಾ ಸರ್ಕ್ಯೂಟ್ಸ್, ವಿಜಯಪುರ – ₹441 ಕೋಟಿ ಹೂಡಿಕೆ | 4,500 ಉದ್ಯೋಗಗಳು
* ಬೆಲ್ಲಾಟ್ರಿಕ್ಸ್ ಏರೋಸ್ಪೇಸ್, ಬೆಂಗಳೂರು ಗ್ರಾಮಾಂತರ – ₹404 ಕೋಟಿ ಹೂಡಿಕೆ | 339 ಉದ್ಯೋಗಗಳು
ಏರೋಸ್ಪೇಸ್, ESDM (Electronics System Design & Manufacturing) ಸೇರಿದಂತೆ ವಿವಿಧ ವಲಯಗಳಲ್ಲಿ ಆಗುತ್ತಿರುವ ಈ ಹೂಡಿಕೆಗಳು ಕರ್ನಾಟಕದ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿವೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.