ತುಮಕೂರು: ನೌಕರರ ಗಳಿಕೆ ರಜೆ ನಗದೀಕರಣ ಮಂಜೂರಾತಿ ಪ್ರಕರಣದಲ್ಲಿ 4.24 ಕೋಟಿ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಧುಗಿರಿ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯಾ ಮತ್ತು ಅವರ ಪತಿ ಜಿ.ಆರ್. ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸೌಮ್ಯಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆಕ್ರಮದಲ್ಲಿ ಭಾಗಿಯಾಗಿರುವ ಪತಿ ಜೊತೆಗೆ ತಲೆಮರಿಸಿಕೊಂಡಿದ್ದ ಸೌಮ್ಯ ಮತ್ತು ರಮೇಶ್ ಅವರನ್ನು ಸೋಮವಾರ ರಾತ್ರಿ ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.
ತಾಲೂಕು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾದ ನೌಕರರ ಖಾತೆಗೆ ಗಳಿಕೆ ರಜೆ ಹಣ ವರ್ಗಾವಣೆಯಲ್ಲಿ ಸೌಮ್ಯಾ ಅಕ್ರಮ ಎಸಗಿದ್ದಾರೆ. ನೌಕರರು ಮತ್ತು ಅವರ ಕುಟುಂಬದವರ ಹೆಸರಿನಲ್ಲಿರುವ ರೆಸಿಪಿಟೆಂಟ್ ಐಡಿ ಬಳಸಿಕೊಂಡು ವಿವಿಧ ಬ್ಯಾಂಕ್ ಖಾತೆಗಳಿಗೆ 118 ಬಾರಿ ಬಿಲ್ ಗಳನ್ನು ಸೃಜಿಸಿ ಒಟ್ಟು 4.24 ಕೋಟಿ ರೂ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.
ನೌಕರರ ಕುಟುಂಬದವರಿಗೆ ಸೇರಬೇಕಿದ್ದ ಹಣವನ್ನು ತಮ್ಮ ಪತಿ ಜೊತೆ ಸೇರಿ ಸಂಬಂಧಿಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಪತಿ ರಮೇಶ್ ಅವರ ನಾಲ್ಕು ಖಾತೆಗಳಿಗೆ ಎರಡು ಕೋಟಿಗೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದಾರೆ. ಇವರಿಬ್ಬರ ಜೊತೆಗೆ ಪ್ರವೀಣ್, ಕುಮಾರ್, ಮೀನಾಕ್ಷಿ, ಶಿವಲೀಲಾ ಎಂಬುವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಕುರಿತಾಗಿ ದೂರು ದಾಖಲಾದ 2 ತಿಂಗಳ ಬಳಿಕ ಮಧುಗಿರಿ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.