ರಾಮನಗರ: ಬಿಡದಿ ಟೌನ್ ಶಿಪ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಜೋರಾಗಿದೆ. ಒಂದೆಡೆ ಟೌನ್ ಶಿಪ್ ನಿರ್ಮಾಣ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ರೈತರಿಂದ ವಶಪಡಿಸಿಕೊಳ್ಳಲಾದ ಭೂಮಿಗೆ ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ಆರಂಭವಾಗಿದೆ.
ರಾಜ್ಯ ಸರ್ಕಾರದ ಬಿಡದಿ ಟೌನ್ಶಿಪ್ ಯೋಜನೆಗೆ ಸುಮಾರು 516 ಎಕರೆಗೂ ಹೆಚ್ಚು ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂ. ರಿಯಲ್ ಎಸ್ಟೇಟ್ ದಂಧೆ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಇದೆಲ್ಲದರ ನಡುವೆ, ಸರ್ಕಾರ ಟೌನ್ ಶಿಪ್ ಗೆ ಭೂಮಿ ನೀಡುವ ರೈತರಿಗೆ ಪರಿಹಾರದ ಚೆಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರಿಗೆ ಚೆಕ್ ಹಸ್ತಾಂತರಿಲಾಯಿತು. ಕೆಂಪಯ್ಯನಪಾಳ್ಯ, ವಡೇರಹಳ್ಳಿ, ಮುಂಡಹಳ್ಳಿ ಈ 3 ಕಂದಾಯ ಗ್ರಾಮಗಳ ಪೈಕಿ ಈವರೆಗೆ 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10ರೈತರಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ಕೆಂಪಯ್ಯನ ಪಾಳ್ಯದಲ್ಲಿ 1 ಎಕರೆ ಜಮೀನಿಗೆ 2,07,30,000 ರೂಪಾಯಿ ನಿಗದಿಪಡಿಸಿದೆ.
ರೈತ ಮಹಿಳೆ ಜಾನಕಮ್ಮ ಎಂಬವರು ಸರ್ಕಾರಕ್ಕೆ 1 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದು, ಈ ಪೈಕಿ 18 ಗುಂಟೆಗೆ 1,00,52,386 ರೂಪಾಯಿ ಪಡೆದಿದ್ದಾರೆ. ಇನ್ನುಳಿದ 22 ಗುಂಟೆಗೆ ನಿವೇಶನ ಪಡೆಯಲು ಒಪ್ಪಿದ್ದಾರೆ. ಪರಿಹಾರದ ಚೆಕ್ ಪಡೆದ ಮಹಿಳೆ ತಮಗೆ ತೃಪ್ತಿಯಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು 6 ಗುಂಟೆ ಜಮೀನನ್ನು ಸರ್ಕಾರ ಬಿಟ್ಟುಕೊಟ್ಟ ಗಿರೀಶ್ ಎಂಬವರಿಗೆ 36,47,083 ರೂಪಾಯಿ ಪರಿಹಾರ ಸಿಕ್ಕಿದೆ.
ಭೂಮಿ ಜೊತೆಗೆ ಜಮೀನಿನಲ್ಲಿರುವ ವಾಣಿಜ್ಯ ಬೆಳೆಗೂ ಪರಿಹಾರ
ತೆಂಗಿನ ಮರಕ್ಕೆ – 40,446
ಮಾವಿನ ಮರ – 62,000
ಅಡಕೆ ಮರಕ್ಕೆ – 7,440
ಬಾಳೆ ಪ್ರತಿ ಎಕರೆಗೆ – 10.86ಲಕ್ಷ
ರೇಷ್ಮೆ ಪ್ರತಿ ಎಕರೆಗೆ – 14 ಲಕ್ಷ
ಪಪ್ಪಾಯ ಪ್ರತಿ ಎಕರೆಗೆ – 12ಲಕ್ಷ
ಹಲಸು ಪ್ರತಿ ಎಕರೆಗೆ – 42,750
ಹುಣಸೆ ಪ್ರತಿ ಎಕರೆಗೆ – 53,310
ಸಪೋಟ ಪ್ರತಿ ಎಕರೆಗೆ – 43,166
ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಪರಿಹಾರ ಕೊಡಿಸದಿದ್ದರೆ ರಾಜಕೀಯ ನಿವೃತ್ತಿಯಾಗುವೆ ಎಂದಿದ್ದಾರೆ. ಒಟ್ಟಾರೆ ಬಿಡದಿ ಟೌನ್ ಶಿಪ್ ಗೆ ಭಾರಿ ವಿರೋಧದ ನಡುವೆಯೂ ಸರ್ಕಾರ ರೈತರಿಗೆ ಪರಿಹಾರ ವಿತರಣೆಗೆ ಚಾಲನೆ ನೀಡಿದೆ.