ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣ ಮತ್ತು ಆಭರಣಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ ಐಟಿ ) ತನ್ನ 150 ಪುಟಗಳ ಪ್ರಾಥಮಿಕ (ಅಂತರೀಕ) ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿದೆ.
ಮೂವರು ಸದಸ್ಯರನ್ನೊಳಗೊಂಡ ಎಸ್ ಐಟಿ ತಂಡವು ಈ ವರದಿಯನ್ನು ಉತ್ತರ ಪ್ರದೇಶದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ ಸಲ್ಲಿಸಿದೆ. ತನಿಖೆಯು ದೇಣಿಗೆ ಹಣದ ದುರ್ಬಳಕೆ, ಆಭರಣಗಳ ಕಳ್ಳತನ ಮತ್ತು ಮಂದಿರದ ಆಡಳಿತಾತ್ಮಕ ಲೋಪಗಳ ಮೇಲೆ ಬೆಳಕು ಚೆಲ್ಲಿದೆ. ನಗದು ಎಣಿಕೆಗೆ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಿದ್ದು, ಅಲ್ಲಿ ನಡೆದ ಅಕ್ರಮಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವನ್ನು ವರದಿ ಉಲ್ಲೇಖಿಸಿದೆ. ಆರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 40 ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಶಿಫಾರಸುಗಳು:
ತಪ್ಪು ಎಸಗಿದ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ (ಈIಖ) ದಾಖಲಿಸಲು ಶಿಫಾರಸು ಮಾಡಲಾಗಿದೆ.ಮಂದಿರದ ಆಡಳಿತವನ್ನು ಸುಧಾರಿಸಲು ಕಾಶಿ ವಿಶ್ವನಾಥ ದೇವಾಲಯದ ಮಾದರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಅಇಔ) ನೇಮಿಸಲು ಮತ್ತು ದೇಣಿಗೆಯ ಸಾಪ್ತಾಹಿಕ ಆಡಿಟ್ (ಲೆಕ್ಕ ಪರಿಶೋಧನೆ) ನಡೆಸಲು ವರದಿ ಸಲಹೆ ನೀಡಿದೆ.
ಸುಮಾರು 150ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಂದಿರ ಟ್ರಸ್ಟ್ನ ಪ್ರಮುಖರ ಆಪ್ತರು ಮತ್ತು ಸಂಬಂಧಿಕರ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.ಈ ಅಂತರೀಕ ವರದಿಯ ಬಳಿಕ ಅಂತಿಮ ತನಿಖಾ ವರದಿಯನ್ನು ಸಿದ್ಧಪಡಿಸಲು ಎಸ್ ಐಟಿ ಇನ್ನಷ್ಟು ಸಮಯ ಕೇಳಿದೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರವು ಈ ವರದಿಯನ್ನು ಪರಿಶೀಲಿಸಿ ಮುಂದಿನ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.
ಪ್ರಕರಣದ ಹಿನ್ನೆಲೆ
ಈ ವಿವಾದವು ಮುಖ್ಯವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭೂಮಿ ಖರೀದಿಯಲ್ಲಿ ಅಕ್ರಮ ಎಸಗಿದೆ ಎಂಬ ಆರೋಪದ ಸುತ್ತ ಸುತ್ತುತ್ತದೆ.2021ರಲ್ಲಿ, ರಾಮಮಂದಿರ ಟ್ರಸ್ಟ್ ಅಯೋಧ್ಯೆಯಲ್ಲಿ ಮಂದಿರದ ಸಮೀಪದ ಭೂಮಿಯನ್ನು ಖರೀದಿಸಿತು. ಈ ಭೂಮಿಯನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಬಾರಿ ಮಾರಾಟ ಮಾಡಲಾಗಿತ್ತು. ಮೊದಲಿಗೆ ಮಾರಾಟಗಾರರು ಅದನ್ನು ಕಡಿಮೆ ಬೆಲೆಗೆ ಖರೀದಿಸಿ, ನಂತರ ಕೆಲವೇ ನಿಮಿಷಗಳಲ್ಲಿ ಟ್ರಸ್ಟ್ಗೆ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಟ್ರಸ್ಟ್ನ ಸ್ಪಷ್ಟನೆ:
ಈ ಆರೋಪಗಳಿಗೆ ಟ್ರಸ್ಟ್ ಉತ್ತರಿಸಿ, ಆ ಭೂಮಿಯ ಬೆಲೆ ಮಾರುಕಟ್ಟೆ ದರಕ್ಕೆ ಅನುಗುಣವಾಗಿಯೇ ಇದೆ ಎಂದು ತಿಳಿಸಿತ್ತು. ಹಲವಾರು ವರ್ಷಗಳ ಹಿಂದೆ ಮಾಡಲಾದ ಒಪ್ಪಂದಗಳು ಮತ್ತು ಮಾರುಕಟ್ಟೆಯ ಏರಿಳಿತಗಳಿಂದಾಗಿ ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಟ್ರಸ್ಟ್ ಸಮರ್ಥಿಸಿಕೊಂಡಿತ್ತು. ಈ ವಿಷಯವು ರಾಜಕೀಯ ಚರ್ಚೆಗೆ ಗ್ರಾಸವಾಯಿತು. ವಿರೋಧ ಪಕ್ಷಗಳು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರೆ, ಆಡಳಿತ ಪಕ್ಷವು ಇದನ್ನು ಮಂದಿರ ನಿರ್ಮಾಣದ ಕೆಲಸಕ್ಕೆ ಅಡ್ಡಿಪಡಿಸುವ ಪ್ರಯತ್ನ ಎಂದು ಬಣ್ಣಿಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.ಈ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ, ಆ ಸಮಯದಲ್ಲಿ ಯಾವುದೇ ದೊಡ್ಡ ಮಟ್ಟದ ಅಕ್ರಮ ಸಾಬೀತಾಗಿಲ್ಲ ಎಂದು ಟ್ರಸ್ಟ್ ಮತ್ತು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದರು. ಯಾವುದೇ ಅಧಿಕೃತ ತನಿಖಾ ಸಂಸ್ಥೆಗಳು ಟ್ರಸ್ಟ್ ವಿರುದ್ಧ ಈ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂದು ಖಚಿತಪಡಿಸಿಲ್ಲ.
ಇದು ಮಂದಿರ ನಿರ್ಮಾಣ ಕಾರ್ಯದ ಹಂತದಲ್ಲಿ ಭೂಮಿ ಖರೀದಿಯ ಬೆಲೆ ಮತ್ತು ಪ್ರಕ್ರಿಯೆಯ ಬಗ್ಗೆ ಉಂಟಾದ ಒಂದು ಗೊಂದಲ ಮತ್ತು ವಿವಾದವಾಗಿದೆ. ಆರೋಪಗಳು ಕೇಳಿಬಂದಾಗ ಟ್ರಸ್ಟ್ ತನ್ನ ವಹಿವಾಟುಗಳು ಪಾರದರ್ಶಕವಾಗಿವೆ ಎಂದು ಹೇಳಿಕೆ ನೀಡಿತ್ತು.