ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಗಸ್ಟ್-2026ರ ಮಾಹೆಯಲ್ಲಿ ಆಗಸ್ಟ್ ಹಾಗೂ ಸೆಪ್ಟೆಂಬರ್-2026ರ ಎರಡು ತಿಂಗಳ ಎನ್ಎಫ್ಎಸ್ಎ ಅಕ್ಕಿ ದಾಸ್ತಾನನ್ನು ಒಟ್ಟಿಗೆ ಹಂಚಿಕೆ ನೀಡಿ, ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡುದಾರರಿಗೆ ವಿತರಿಸಲಾಗುತ್ತಿದೆ.
ಎರಡು ತಿಂಗಳ ಪಡಿತರವನ್ನು ಆಗಸ್ಟ್ ಮಾಹೆಯಲ್ಲಿಯೇ ವಿತರಿಸಲಾಗುತ್ತಿದ್ದು, ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಗಳಿಗೆ ಸಂಬಂಧಿಸಿದಂತೆ ಕಾರ್ಡುದಾರರಿಂದ ಎರಡು ಬಾರಿ ಬಯೋಮೆಟ್ರಿಕ್ ಪಡೆಯಲಾಗುತ್ತದೆ.
ಆಗಸ್ಟ್-2026ರ ಮಾಹೆಯಲ್ಲಿ ಕಾರ್ಡುದಾರರಿಗೆ ವಿತರಿಸುವ ಪ್ರಮಾಣ: ಅಂತ್ಯೋದಯ ಅನ್ನ ಯೋಜನೆ(ಎಎವೈ) ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಪ್ರತಿ ಪಡಿತರ ಚೀಟಿಗೆ 28 ಕೆ.ಜಿ. ಅಕ್ಕಿ ಹಾಗೂ 42 ಕೆ.ಜಿ. ಜೋಳ ಸೇರಿದಂತೆ ಒಟ್ಟು 70 ಕೆ.ಜಿ. ಆಹಾರ ಧಾನ್ಯ. ಕೇಂದ್ರ ಪಡಿತರ ಚೀಟಿ ಸದಸ್ಯರಿಗೆ ಸಂಬಂಧಿಸಿದಂತೆ ಪ್ರತಿ ಸದಸ್ಯರಿಗೆ 4 ಕೆ.ಜಿ. ಅಕ್ಕಿ ಹಾಗೂ 6 ಕೆ.ಜಿ. ಜೋಳ ಸೇರಿದಂತೆ ಒಟ್ಟು 10 ಕೆ.ಜಿ. ಆಹಾರ ಧಾನ್ಯ. ರಾಜ್ಯ ಪಡಿತರ ಚೀಟಿ ಸದಸ್ಯರಿಗೆ ಸಂಬಂಧಿಸಿದಂತೆ ಪ್ರತಿ ಸದಸ್ಯರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು.
ಆಗಸ್ಟ್ ಮಾಹೆಯಲ್ಲಿ ಎರಡು ತಿಂಗಳ ಪಡಿತರವನ್ನು ವಿತರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಈ ಕುರಿತು ಗಮನಹರಿಸಿ, ನ್ಯಾಯಬೆಲೆ ಅಂಗಡಿಗಳ ಮೂಲಕ ನಿಗದಿತ ಪ್ರಮಾಣದ ಪಡಿತರವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.