ಬಾಗಲಕೋಟೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಗಂಭೀರ ಆರೋಪ ಮಾಡಿದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವ ಸ್ಥಾನಗಳು ಹರಾಜಾಗಿವೆ. ಈ ಬಗ್ಗೆ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ನಂಜಯ್ಯಮಠ ಮಾತನಾಡಿದ್ದಾರೆ ಎಂಬ ಆಡೋಯೋವೇ ಪುಷ್ಠಿ ನೀಡುತ್ತವೆ ಎಂದು ಹೇಳಿದ್ದರು. ಅಲ್ಲದೇ ಆಡಿಯೋ ಕೂಡ ಬಿಡುಗಡೆ ಮಾಡಿದ್ದರು.
ಆರ್.ಬಿ.ತಿಮ್ಮಾಪುರ ಹಾಗೂ ನಂಜಯ್ಯಮಠ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ನಂಜಯ್ಯಮಠ ಸ್ಪಷ್ಟನೆ ನೀಡಿದ್ದಾರೆ. ನಾನು ಆರ್.ಬಿ.ತಿಮ್ಮಾಪುರ ಅವರಿಗೆ ಕರೆ ಮಾಡಿ ಮಾತನಾಡಿದ್ದು ನಿಜ. ಆದರೆ 70-80% ಅಂತ ನಾನು ಮಾತನಾಡಿಲ್ಲ. ಅದೆಲ್ಲವನ್ನೂ ತಿರುಚಲಾಗಿದೆ ಎಂದು ಹೇಳಿದರು.
ನಾನೆಲ್ಲೂ ಹೈಕಮಾಂಡ್ ನಾಯಕರು ಹುಚ್ಚರು ಎಂದು ಹೇಳಿಲ್ಲ. ಆಡಿಯೋದಲ್ಲಿರುವ ಆರಂಭಿಕ ಮಾತುಗಳಷೇ ನನ್ನದು ನಂತರದ ಮಾತುಗಳು ನನ್ನದಲ್ಲ. ಎಲ್ಲಾ ಕಟ್ ಕಟ್ ಮಾಡಿ ಜೋಡಿಸಿರುವುದು ಆಡಿಯದಲ್ಲೇ ಸ್ಪಷ್ಟವಾಗುತ್ತದೆ. ಆರಂಭಿಕ ಮಾತಷ್ಟೇ ನನ್ನದು, ಆನಂತರದ ಧ್ವನಿ ಕೂಡ ನನ್ನದಲ್ಲ. ನಾನು ಹೈಕಮಾಂಡ್ ನಾಯಕರ ವಿರುದ್ಧವಾಗಿ ಯಾವುದೇ ಮಾತುಗಳನ್ನು ಆಡಿಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದರು.
ಆರ್.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅವರಿಗೆ ಕರೆ ಮಾಡಿ ಮಾತನಾಡಿದ್ದೆ. ತಿಮ್ಮಾಪುರ ಅವರು ಉತ್ತರ ಕರ್ನಾಅಟಕದ ಹಳೇ ರಾಜಕಾರಣಿ. ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ ಅವರನ್ನೂ ಕೈಬಿಟ್ಟಿದ್ದಾರೆ. ಮಂತ್ರಿಯಾಗಿದ್ದರೆ ಸಂತೋಷವಾಗುತ್ತಿತ್ತು ಎಂದು ಮಾತನಾಡಿದ್ದೇನೆ. ಹೊರತು ಬೇರೆನೂ ಮಾತನಾಡಿಲ್ಲ. ಅನಗತ್ಯವಾಗಿ ನನ್ನ ವಿರುದ್ಧ ಆಡಿಯೋ ಆರೋಪ ಮಾಡಲಾಗಿದೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.
ನಾವಿಬ್ಬರೇ ಮಾತಾಡಿದ್ದು ವೈರಲ್ ಹೇಗೆ ಆಯ್ತು? ವೈರಲ್ ಗೆ ಯಾರು ಕಾರಣ? ಈ ಬಗ್ಗೆ ಸೈಬರ್ ಪೊಲೀಸರಿಂದ ತನಿಖೆಯಾಗಲಿ. ನನ್ನ ಧ್ವನಿಯನ್ನು ತಿರುಚಿ ವೈರಲ್ ಮಾಡಿರುವವರ ವಿರುದ್ಧ ಕ್ರಮವಾಗಲಿ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.