ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಹಲವು ಗೊಂದಲ, ಅಸಮಾಧಾನಗಳಿಗೆ ಕಾರಣವಾಗಿದೆ. ಸಚಿವ ಸ್ಥಾನ ನಿರೀಕ್ಷೆಯಲ್ಲಿದ್ದ ಹಲವು ಹಿರಿಯ ನಾಯಕರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ. ಇದು ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.
ಈ ಬಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕಲಬುರಗಿ ಜಿಲ್ಲೆಯ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಇದರಿಂದ ನಿರಾಶರಾಗಿರುವ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನ ವಂಚನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿ.ಆರ್. ಪಾಟೀಲ್, ಸ್ವಪಕ್ಷೀಯರ ವಿರುದ್ಧವೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ನಮ್ಮ ಸ್ವಂತ ಜಿಲ್ಲೆಯ ನಾಯಕರೇ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನನಗೆ ಸಚಿವ ಸ್ಥಾನ ನೀದಲು ನಮ್ಮ ಜಿಲ್ಲೆಯವರೇ ಅಡ್ಡಿಪಡಿಸಿದ್ದಾರಂತೆ. ಈ ಬಗ್ಗೆ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ನೆಪ ಹೇಳಿದ್ರೋ, ಸತ್ಯ ಹೇಳಿದ್ರೋ ಗೊತ್ತಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಯಾವತ್ತೂ ನನ್ನನ್ನು ಮಂತ್ರಿ ಮಾಅಡಿ ಎಂದು ಎಲ್ಲಿಯೂ ಹೋಗಿಲ್ಲ. ಸಿದ್ದರಾಮಯ್ಯ ಚುನಾವಣೆ ವೇಳೆ ನನ್ನನ್ನು ಗೆಳೆಯನಂತೆ ಆಯ್ಕೆ ಮಾಡಿದರು. ನಾನು ಸಚಿವನನ್ನಾಗಿ ಮಾಡಿ ಕಳುಹಿಸುತ್ತೇನೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಮೂರು ಬಾರಿ ಕರೆದು ಮಂತ್ರಿ ಮಾಡುವುದಾಗಿ ಹೇಳಿದರು. ಮಂತ್ರಿ ಮಾಡಿ ಎಂದು ನಾನೇನು ಅರ್ಜಿ ಹಾಕಲಿಲ್ಲ, ಅವರೇ ಕರೆದರು. ಆದರೆ ಈಗ ಕೊಟ್ಟ ಮಾತು ತಪ್ಪಿದ್ದಕ್ಕೆ ನನಗೆ ಬೇಸರವಾಯ್ತು. 140 ಶಾಸಕರಿದ್ದಾರೆ. ಕರೆದು ಮಾತನಾಡುವ ಸಂದರ್ಭವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.