ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ನೇತೃತ್ವದ ಸಮಿತಿಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ವರದಿ ಸಲ್ಲಿಸಿದೆ. ನ್ಡಿಎ ಮೈತ್ರಿಕೂಟದ ಒಟ್ಟು 12 ಸದಸ್ಯರು ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸೇರಿ ಈ ಅಡ್ಡಮತದಾನ ನಡೆದಿದೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ವರದಿ ಸಲ್ಲಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಇದು ಆಂತರಿಕ ತನಿಖೆಯ ವರದಿಯಾಗಿದ್ದು, ಸಿದ್ಧಪಡಿಸಿದ ವರದಿಯನ್ನು ರಾಜ್ಯಾಧ್ಯಕ್ಷರಿಗೆ ತಲುಪಿಸಿದ್ದೇವೆ. ಬಿಜೆಪಿ ಭಾಗದಿಂದ ಮೂರು ಮತಗಳು ಕ್ರಾಸ್ ವೋಟ್ ಆಗಿದ್ದು, ಒಂದು ಮತ ಅಸಿಂಧುಗೊಂಡಿದೆ. ಜೆಡಿಎಸ್ ಪಾಲಿನ 22 ಮತಗಳ ಪೈಕಿ ಕೇವಲ 14 ಮತಗಳು ಮಾತ್ರ ಬಂದಿದ್ದು, ಎಂಟು ಮತಗಳು ಕ್ರಾಸ್ ವೋಟ್ ಆಗಿವೆ. ಹೀಗಾಗಿ ಬಿಜೆಪಿ-ಜೆಡಿಎಸ್ ಒಟ್ಟು 12 ಮತಗಳು ಅಡ್ಡಚಲಾವಣೆಯಾಗಿವೆ ಎಂದು ತಿಳಿಸಿದ್ದಾರೆ.
ಇದು ಆಂತರಿಕ ಸಮಿತಿ ವರದಿಯಾಗಿರುವುದರಿಂದ ವರದಿಯಲ್ಲಿನ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ನವರು ಅನೈತಿಕ ಮಾರ್ಗದಿಂದ ಈ ಅಡ್ಡ ಮತದಾನ ಮಾಡಿಸಿದ್ದು, ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಬೇರೆ ರಾಜ್ಯದಲ್ಲಿ ಕ್ರಾಸ್ ವೋಟಿಂಗ್ ಆದಾಗ ಕಾಂಗ್ರೆಸ್ ನವರು ಪ್ರಜಾಪ್ರಭುತ್ವದ ಮೌಲ್ಯಕ್ಕೆ ವಿರುದ್ಧ ಎಂದು ಉಪದೇಶ ಮಾಡುತ್ತಿದ್ದರು. ಈಗ ಕಾಂಗ್ರೆಸ್ ನವರೇ ಕ್ರಾಸ್ ವೋಟಿಂಗ್ ಮಾಡಿಸುವ ಮೂಲಕ ಪ್ರಜಾಪ್ರಭುತ್ವವನ್ನು ಅಪಮೌಲ್ಯಗೊಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಕ್ರಾಸ್ ವೋಟಿಂಗ್ ಆದರೆ ಅದನ್ನು ಪ್ರಶ್ನಿಸುವ ನೈತಿಕತೆ ನಿಮಗೆ ಇಲ್ಲ ಎಂದು ಗುಡುಗಿದರು.