ವಿಜಯಪುರ: ಆಲಮಟ್ಟಿ ಜಲಾಶಯ ಎತ್ತರದ ಹಿನ್ನೀರಿನಿಂದ ಬಾಧಿತವಾಗುವ ಎಲ್ಲ ಗ್ರಾಮಸ್ಥರ ಹಿತ ಕಾಪಾಡಲು ಬದ್ಧ ಎಂದು ವಾಣಿಜ್ಯ ಮತ್ತು ಕೈಗಾರಿಕೆಗಳು, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಜಯಪುರದ ನಮ್ಮ ಗೃಹ ಕಚೇರಿಯಲ್ಲಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ರೈತರೊಂದಿಗೆ ಸುದೀರ್ಘ ಸಭೆ ನಡೆಸಿ, ಅವರ ಸಮಸ್ಯೆಗಳು, ಆತಂಕಗಳು ಮತ್ತು ಬೇಡಿಕೆಗಳನ್ನು ಆಲಿಸಿ ಅವರು ಮಾತನಾಡಿದರು.
ಆಲಮಟ್ಟಿ ಜಲಾಶಯವನ್ನು 524.256 ಮೀಟರ್ ಗೆ ಎತ್ತರಿಸುವುದರಿಂದ ಅಣೆಕಟ್ಟೆಯ ಹಿನ್ನೀರಿನಲ್ಲಿ ಒಟ್ಟು 75,563 ಎಕರೆ ಭೂಮಿ ಮುಳುಗಡೆಯಾಗುವ ಸಾಧ್ಯತೆಯಿದೆ. ಈ ಯೋಜನೆಯಿಂದ ಬಾಧಿತವಾಗುವ ಪ್ರತಿಯೊಬ್ಬ ರೈತ ಬಾಂಧವರ ಹಿತ ಕಾಪಾಡಲು ನಾನು ಮತ್ತು ನಮ್ಮ ಸರ್ಕಾರ ಸಂಪೂರ್ಣ ಬದ್ಧರಾಗಿದ್ದೇವೆ ಎಂದರು.
ಯುಕೆಪಿ 3ನೇ ಹಂತ – ಸಂತ್ರಸ್ತರ ಹಿತವೇ ನಮ್ಮ ಆದ್ಯತೆಯಾಗಿದೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಹಿನ್ನೀರಿನ ಪರಿಣಾಮಕ್ಕೆ ಒಳಗಾಗುವ ರೈತರು, ಗ್ರಾಮಸ್ಥರು ಹಾಗೂ ಕುಟುಂಬಗಳ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದಿಲ್ಲ. ಸೂಕ್ತ ಪರಿಹಾರ ಮತ್ತು ಮೂಲಸೌಕರ್ಯಗಳೊಂದಿಗೆ ಪ್ರತಿಯೊಬ್ಬ ಸಂತ್ರಸ್ತರಿಗೂ ನ್ಯಾಯ ದೊರಕುವಂತೆ ಸರ್ಕಾರ ಬದ್ಧವಾಗಿದೆ ಎಂದರು.
ಅಭಿವೃದ್ಧಿ ಎಂದರೆ ಕೇವಲ ಯೋಜನೆಗಳ ನಿರ್ಮಾಣವಲ್ಲ; ಜನರ ಬದುಕು ಮತ್ತು ಭವಿಷ್ಯವನ್ನು ಸುರಕ್ಷಿತಗೊಳಿಸುವ ಜವಾಬ್ದಾರಿಯೂ ಆಗಿದೆ. ಯುಕೆಪಿ 3ನೇ ಹಂತದ ಪ್ರತಿಯೊಂದು ಹೆಜ್ಜೆಯಲ್ಲೂ ಸಂತ್ರಸ್ತರ ಹಕ್ಕುಗಳ ರಕ್ಷಣೆ ಮತ್ತು ಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು
ಈ ಹಿಂದೆ ಪ್ರತಿ ಎಕರೆ ಒಣಬೇಸಾಯ ಜಮೀನಿಗೆ ₹8 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹12 ಲಕ್ಷ ಪರಿಹಾರ ನಿಗದಿಯಾಗಿತ್ತು. ಆದರೆ ರೈತರ ಹಿತದೃಷ್ಟಿಯಿಂದ ಒಣಬೇಸಾಯ ಜಮೀನಿಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನಿಗದಿಪಡಿಸಲು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದರು.
ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಬಬಲೇಶ್ವರ ತಾಲೂಕು ಸೇರಿದಂತೆ ಒಟ್ಟು 49 ಗ್ರಾಮಗಳ ಸುಮಾರು 15,000 ಎಕರೆ ಜಮೀನಿಗೆ ಅಂದಾಜು ₹3,000 ಕೋಟಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ಹಂತಗಳ ಅಧಿಸೂಚನೆಗಳನ್ನು ಹೊರಡಿಸಲು ಕಾರ್ಯೋನ್ಮುಖನಾಗಿದ್ದೇನೆ.
ಈ ಭಾಗದ ಅಸ್ಮಿತೆಯಾಗಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೂ ಆದ್ಯತೆ ನೀಡಲಾಗಿದೆ. ಸಂಕಷ್ಟದಲ್ಲಿರುವ ಕಾರ್ಖಾನೆಯ ಉಳಿವಿಗಾಗಿ ವಿಶೇಷ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಚರ್ಚಿಸಿ ಕೆಇಆರ್ಸಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಯುಕೆಪಿ 3ನೇ ಹಂತದ ಈ ಮಹತ್ವಾಕಾಂಕ್ಷಿ ಯೋಜನೆ ಸಂಪೂರ್ಣವಾಗಿ ಜಾರಿಯಾಗುವವರೆಗೂ ರೈತರ ಪರವಾಗಿ ನಿಂತು ಕೆಲಸ ಮಾಡುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ. ಯಾವುದೇ ರೈತನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ನಾನು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಅದೃಶ್ಯಪ್ಪ, ರಾಜೇಂದ್ರ ದೇಸಾಯಿ, ಶಂಕರಗೌಡ ಪಾಟೀಲ(ಶಿರಬೂರ), ವಿ.ಎಚ್. ಬಿದರಿ, ಕೆ.ಸಿ. ದೇಸಾಯಿ, ಅಶೋಕ ಮಲಘಾಣ, ಕುಮಾರ ದೇಸಾಯಿ, ರಾಮಚಂದ್ರ ಕೊಡಬಾಗಿ, ಬಿ.ಡಿ. ಪಾಟೀಲ, ಬಿ.ಆರ್. ದೇಸಾಯಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.