ಬೆಂಗಳೂರು: ತುಂಗಾಭದ್ರಾ ಡ್ಯಾಂಗೆ ಹೊಸ ಗೇಟ್ ಗಳ ಅಳವಡಿಕೆ ಯಶಸ್ವಿಯಾಗಿ ಮುಗಿದು ಉದ್ಘಾಟನೆಗೊಳ್ಳುತ್ತಿರುವುದು ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹಾರೈಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನೀರಿನ ರಭಸಕ್ಕೆ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದದ್ದು ತುಂಗಭದ್ರಾ ಜಲಾನಯನ ಪ್ರದೇಶದ ರೈತರ ಭವಿಷ್ಯವನ್ನು ಅನಿಶ್ಚಿತತೆಗೆ ದೂಡಿತ್ತು. ರೈತರ ಈ ಆತಂಕವನ್ನು ಅರ್ಥೈಸಿಕೊಂಡು, ತತ್ ಕ್ಷಣದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿ, ಆದಷ್ಟು ಶೀಘ್ರ ಗೇಟ್ ಅಳವಡಿಕೆ ಮಾಡಿ ನೀರು ಪೋಲಾಗುವುದನ್ನು ತಡೆಯುವಂತೆ ಸೂಚಿಸಿದ್ದೆ. ಕೇವಲ 6 ದಿನಗಳ ಒಳಗೆ ಹೊಸ ಗೇಟ್ ಅಳವಡಿಕೆ ಮಾಡುವ ಮೂಲಕ ಜಲಾಶಯದ ನೀರು ವ್ಯರ್ಥವಾಗಿ ಹರಿದುಹೋಗುವುದನ್ನು ತಡೆದು, ಅನ್ನದಾತರ ಆತಂಕವನ್ನು ನಿವಾರಣೆ ಮಾಡಿದ್ದೆವು ಎಂದು ತಿಳಿಸಿದ್ದಾರೆ.
ಆದರೆ ಇದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂಬ ಅರಿವು ನಮ್ಮ ಸರ್ಕಾರಕ್ಕೆ ಇದ್ದುದ್ದರಿಂದಲೇ ತಜ್ಞರ ಸಮಿತಿಯ ಮೂಲಕ ಜಲಾಶಯದ ಉಳಿದೆಲ್ಲಾ ಗೇಟ್ ಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ, ಅವರಿಂದ ವರದಿ ಪಡೆದಿದ್ದೆವು. ಸುಮಾರು 70 ವರ್ಷಗಳಷ್ಟು ಹಳೆಯದಾಗಿರುವ ಜಲಾಶಯದ ಗೇಟ್ ಗಳನ್ನು ಬದಲಾವಣೆ ಮಾಡುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರ ವರದಿಯಲ್ಲಿ ಬಂದಿತ್ತು. ರೈತರ ಹಿತಕಾಯುವ ವಿಚಾರದಲ್ಲಿ ನನ್ನ ಇಡೀ ರಾಜಕೀಯ ಬದುಕಿನಲ್ಲಿ ರಾಜಿಯಾದವನಲ್ಲ, ವರದಿ ನನ್ನ ಗಮನಕ್ಕೆ ಬಂದ ತಕ್ಷಣವೇ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಹೊಸ ಗೇಟ್ ಅಳವಡಿಕೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದೆ ಎಂದು ಹೇಳಿದ್ದಾರೆ.
ಸುಮಾರು 51 ಕೋಟಿ ರೂ. ವೆಚ್ಚದ ಹೊಸ ಗೇಟ್ ಗಳ ಅಳವಡಿಕೆ ಕಾರ್ಯ ಪೂರ್ಣಗೊಂಡು, ನಾಳೆ ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರ. ಅತ್ಯಂತ ಕಡಿಮೆ ಅವಧಿಯಲ್ಲಿ ಗೇಟ್ ಗಳ ಅಳವಡಿಕೆ ಕಾರ್ಯ ಆರಂಭಿಸಿ, ಈ ವರ್ಷದ ಮಳೆಗಾಲದಲ್ಲಿ ಜಲಾಶಯದ ನೀರಿನ ಸಂಗ್ರಹಣೆಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಕಾಮಗಾರಿ ಪೂರ್ಣಗೊಳಿಸಿರುವ ನೀರಾವರಿ ಇಲಾಖೆಯ ಅಧಿಕಾರಿಗಳಿಗೂ, ಸಿಬ್ಬಂದಿಗಳಿಗೂ, ಕಾಮಗಾರಿ ನಡೆಸಿದ ಕಂಪೆನಿಗೂ, ಎಲ್ಲ ತಂತ್ರಜ್ಞರಿಗೂ ಹಾಗೂ ಸರ್ಕಾರದ ಸಚಿವರುಗಳಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಹೊಸ ಗೇಟ್ ಗಳ ಅಳವಡಿಕೆ ಯಶಸ್ವಿಯಾಗಿ ಮುಗಿದು ಉದ್ಘಾಟನೆಗೊಳ್ಳುತ್ತಿರುವುದು ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.