ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ರಾಜಕೀಯ ವಲಯದಲ್ಲಿ ಈಗ ವಿಜಯೋತ್ಸವದ ತಮಟೆ ಸದ್ದು ಜೋರಾಗಿದೆ ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಹಾಗೂ ಕಲಬುರಗಿ ಜಿಲ್ಲೆಯ ಆಳಂದ ಪುರಸಭೆಯ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರರಾದ ಬಸವರಾಜ ಪಾಟೀಲ ಮರುಮ್ (Basavaraj Patil Murum) ಅವರು ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ.
ಧಾರಾಶಿವ-ಲಾತೂರ-ಬೀಡ ಜಿಲ್ಲೆಗಳ ಸ್ಥಳೀಯ ಸಂಘ–ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ ನಡೆದ ತೀವ್ರ ಹಣಾಹಣಿಯ ಚುನಾವಣೆಯಲ್ಲಿ ಬಸವರಾಜ ಪಾಟೀಲ ಅವರು ಬರೋಬ್ಬರಿ 850 ಮತಗಳ ಭಾರಿ ಅಂತರದಿಂದ ವಿಜಯಲಕ್ಷ್ಮಿಯನ್ನು ವರಿಸಿದ್ದಾರೆ
ಆಳಂದ ಗಡಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಜಯಘೋಷ
ಬಸವರಾಜ ಪಾಟೀಲ ಮರುಮ್ ಅವರ ಗೆಲುವಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ಇತ್ತ ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಬಸವರಾಜ ಪಾಟೀಲರ ಹಿತೈಷಿಗಳು, ಕುಟುಂಬಸ್ಥರು ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಮಹಾರಾಷ್ಟ್ರ ರಾಜಕೀಯದಲ್ಲಿ ಈಗಾಗಲೇ 2 ಬಾರಿ ಶಾಸಕರಾಗಿ ಹಾಗೂ ಒಮ್ಮೆ ಯಶಸ್ವಿ ಸಚಿವರಾಗಿ ಜನಪರ ಸೇವೆ ಸಲ್ಲಿಸಿರುವ ಬಸವರಾಜ ಪಾಟೀಲರು, ಈ ಮಹತ್ವದ ಗೆಲುವಿನ ಮೂಲಕ ಇದೀಗ ಮತ್ತೊಮ್ಮೆ ಶಾಸನಸಭೆಯನ್ನು (ವಿಧಾನ ಪರಿಷತ್) ಪ್ರವೇಶಿಸುತ್ತಿದ್ದಾರೆ.
“ನಮ್ಮ ಮನೆತನದ ಕುಡಿ ಇಡೀ ಕುಟುಂಬಕ್ಕೆ ಹೆಮ್ಮೆ” – ವಿಠ್ಠಲರಾವ್ ಪಾಟೀಲ್ ಭಾವುಕ
ತಮ್ಮ ಸಹೋದರನ ಅದ್ಭುತ ಗೆಲುವಿನ ಬಗ್ಗೆ ಆಳಂದ ವಿಜಯೋತ್ಸವದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರು ಭಾವುಕರಾದರು. “ನಮ್ಮ ಮನೆತನದ ಕುಡಿಯಾದ ಬಸವರಾಜ ಅವರು ಈ ಹಿಂದೆ ಶಾಸಕರಾಗಿ, ಸಚಿವರಾಗಿ ರಾಜ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಈಗ ಮತ್ತೊಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕುಟುಂಬಕ್ಕೆ ಮತ್ತು ಗಡಿಭಾಗದ ಜನತೆಗೆ ಅಪಾರ ಹೆಮ್ಮೆ ತಂದಿದೆ. ಅವರ ದಶಕಗಳ ಜನಪ್ರಿಯತೆ ಮತ್ತು ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಮತದಾರರು ಈ ಅಭೂತಪೂರ್ವ ಬೆಂಬಲ ನೀಡಿದ್ದಾರೆ” ಎಂದು ಸಂತಸ ಹಂಚಿಕೊಂಡರು.