ಧಾರವಾಡ: ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಹೋದ ವೇಳೆ ನಡೆದ ಗಲಾಟೆಯಲ್ಲಿ ತಂದೆ ಮತ್ತು ಮಗನ ಮೇಲೆ ಜುವೆಲ್ಲರಿ ಅಂಗಡಿ ಮಾಲೀಕ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯ ವೇಳೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿಯ ಕಾಲಿಗೂ ಗುಂಡು ತಾಗಿದೆ.
ಗರಗ ಗ್ರಾಮದ ಮೋಹನ ಜುವೆಲರ್ಸ್ ಮಾಲೀಕ ಮೌನೇಶ ರುದ್ರಪ್ಪ ಬಡಿಗೇರ(50) ಫೈರಿಂಗ್ ಮಾಡಿದ ಆರೋಪಿ. ಘಟನೆಯಲ್ಲಿ ಜೀರಿಗೆವಾಡ ಗ್ರಾಮದ ನಿಂಗಪ್ಪ ಹೊರಕೇರಿ(64), ಅವರ ಪುತ್ರ ಸಿದ್ದಪ್ಪ ಹೊರಕೇರಿ(30) ಮತ್ತು ನಾಲ್ಕನೇ ತರಗತಿ ಓದುತ್ತಿರುವ 9 ವರ್ಷದ ಬಾಲಕಿಗೆ ಗಾಯಗಳಾಗಿವೆ.
ಗರಗ ಗ್ರಾಮದ ಮಾರ್ಕೆಟ್ ಪ್ರದೇಶದಲ್ಲಿರುವ ಮೌನೇಶ್ವರ ಜುವೆಲ್ಲರಿಯಲ್ಲಿ ಕೆಲವು ತಿಂಗಳ ಹಿಂದೆ ನಿಂಗಪ್ಪ ಹೊರಕೇರಿ 60 ಸಾವಿರಕ್ಕೆ ಚಿನ್ನವನ್ನು ಒತ್ತೆ ಇಟ್ಟಿದ್ದರು. ಸೋಮವಾರ ಹಣ ಕೊಟ್ಟು ಚಿನ್ನಾಭರಣ ಬಿಡಿಸಿಕೊಳ್ಳಲು ಹೋದಾಗ ಅಂಗಡಿಯ ಮಾಲೀಕ ಮೌನೇಶ ಚಿನ್ನ ಮರಳಿಸಲು ಹಿಂದೇಟು ಹಾಕಿದ್ದಾನೆ. ಆತ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದೇ ವಿಚಾರವಾಗಿ ಗಲಾಟೆಯಾಗಿ ನಿಂಗಪ್ಪ ಮತ್ತು ಅವರ ಪುತ್ರನ ಮೇಲೆ ಅಂಗಡಿ ಮಾಲೀಕನ ಗುಂಡು ಹಾರಿಸಿದ್ದಾನೆ. ನಿಂಗಪ್ಪನ ಕಾಲಿಗೆ, ಸಿದ್ದಪ್ಪನ ಹೊಟ್ಟೆಗೆ ಗುಂಡು ತಾಗಿದೆ. ಈ ಸಂದರ್ಭದಲ್ಲಿ ಮನೆಗೆ ಹೋಗುತ್ತಿದ್ದ ಬಾಲಕಿಗೂ ಗಾಯವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.