ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಪ್ರಸಿದ್ಧಿಗಾಗಿ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಉತ್ಪನ್ನಗಳ ವಿರುದ್ಧ ನೆಗೆಟಿವ್ ವಿಡಿಯೋ ಮಾಡಿ ಕೋಟ್ಯಂತರ ಗ್ರಾಹಕರಲ್ಲಿ ಆತಂಕ ಮೂಡಿಸಿದ್ದ ಬೆಂಗಳೂರಿನ ಖ್ಯಾತ ಮಹಿಳಾ ವೈದ್ಯೆ ಡಾ. ಶರಣ್ಯ ಪದ್ಮಾ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಅತ್ಯಂತ ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಅವರ ವಿರುದ್ಧ ದಾಖಲಾಗಿರುವ ಪೊಲೀಸ್ ಎಫ್ಐಆರ್ (FIR) ಅನ್ನು ರದ್ದುಗೊಳಿಸಲು ನ್ಯಾಯಾಲಯವು ಖಡಾಖಂಡಿತವಾಗಿ ನಿರಾಕರಿಸಿದೆ
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡಬೇಕು ಎಂಬ ವೈದ್ಯೆಯ ಮನವಿಯನ್ನು ಪುರಸ್ಕರಿಸದ ಹೈಕೋರ್ಟ್, ಪೊಲೀಸರಿಗೆ ತನಿಖೆಯನ್ನು ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಈ ಪ್ರಮುಖ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ಅತ್ಯಂತ ಕಠಿಣ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವೈದ್ಯೆಯ ಬೇಜವಾಬ್ದಾರಿ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ನ್ಯಾಯಪೀಠ ಆಡಿದ ಮಾತುಗಳು ಇಡೀ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ:
“ಹಾಲು ಚೆನ್ನಾಗಿಲ್ಲ ಅಂದ್ರೆ ನೀವು ಕುಡಿಬೇಡಿ”: “ನಿಮಗೆ ನಂದಿನಿ ಹಾಲು ಇಷ್ಟವಿಲ್ಲದಿದ್ದರೆ ಅಥವಾ ಅದು ಚೆನ್ನಾಗಿಲ್ಲ ಎಂದು ಅನಿಸಿದರೆ ನೀವು ಕುಡಿಯುವುದನ್ನು ನಿಲ್ಲಿಸಿ. ಅದನ್ನು ಬಿಟ್ಟು ಇಡೀ ಸಮಾಜವೇ ನಂಬಿರುವ ಬ್ರ್ಯಾಂಡ್ ಅನ್ನು ವಿಷಪೂರಿತ ಎಂದು ಬಿಂಬಿಸಲು ನಿಮಗೇನು ಹಕ್ಕಿದೆ?” ಎಂದು ಪೀಠ ಪ್ರಶ್ನಿಸಿತು.
“ಲ್ಯಾಬ್ ರಿಪೋರ್ಟ್ ಎಲ್ಲಿದೆ?”: “ನೀವು ಈ ಹಾಲನ್ನು ಯಾವುದಾದರೂ ಅಧಿಕೃತ ಲ್ಯಾಬ್ನಲ್ಲಿ ಟೆಸ್ಟ್ ಮಾಡಿಸಿದ್ದೀರಾ? ಆ ವರದಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದೀರಾ? ಯಾವ ಗಟ್ಟಿ ಆಧಾರದ ಮೇಲೆ ಸಾರ್ವಜನಿಕವಾಗಿ ಆತಂಕ ಸೃಷ್ಟಿಸುತ್ತಿದ್ದೀರಿ?” ಎಂದು ಕೋರ್ಟ್ ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡಿತು.
“ಇನ್ಸ್ಟಾಗ್ರಾಂ ರೀಲ್ಸ್ ಇರೋದು ಇದಕ್ಕಲ್ಲ”: ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯರೇ ಈ ರೀತಿ ವರ್ತಿಸಿದರೆ ಹೇಗೆ? ಇನ್ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಲ್ಲ ಎಂದು ಜಸ್ಟಿಸ್ ಎಂ. ನಾಗಪ್ರಸನ್ನ ಚಾಟಿ ಬೀಸಿದರು.
ಅಸಲಿಗೆ ಡಾ. ಶರಣ್ಯ ಏನೆಲ್ಲಾ ಆರೋಪ ಮಾಡಿದ್ದರು?
ಕಳೆದ ಫೆಬ್ರವರಿ 8 ರಂದು ಡಾ. ಶರಣ್ಯ ಪದ್ಮಾ ಅವರು ಇನ್ಸ್ಟಾಗ್ರಾಂನಲ್ಲಿ ರೀಲ್ ಒಂದನ್ನು ಅಪ್ಲೋಡ್ ಮಾಡಿದ್ದರು. ಅದರಲ್ಲಿ ನಂದಿನಿ ಉತ್ಪನ್ನಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿತ್ತು:
ನಂದಿನಿ ಬ್ರಾಂಡ್ನ ಕ್ರೀಮ್ ಬನ್, ಸ್ಟ್ರಾಬೆರಿ ಫ್ಲೇವರ್ಡ್ ಹಾಲು, ಪನೀರ್ ಮುಂತಾದ ಉತ್ಪನ್ನಗಳು ‘ವಿಷಕಾರಿ’ (Toxic) ಆಗಿದ್ದು, ಅವುಗಳಲ್ಲಿ ಹಾನಿಕಾರಕ ಕೆಮಿಕಲ್ಸ್ಗಳಿವೆ.
ಈ ಉತ್ಪನ್ನಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿ ಸ್ವಯಂ ನಿರೋಧಕ ಅಸ್ವಸ್ಥತೆ (Auto-immune diseases) ಕಾಡಲಿದ್ದು, ದೀರ್ಘಕಾಲದ ಬಳಕೆಯಿಂದ ಭವಿಷ್ಯದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ (Cancer) ಬರುತ್ತದೆ
ನಂದಿನಿ ಸ್ಟ್ರಾಬೆರಿ ಹಾಲಿನಲ್ಲಿ ನೈಸರ್ಗಿಕ ಹಣ್ಣುಗಳೇ ಇಲ್ಲ, ಬರೀ ಕೃತಕ ಬಣ್ಣ ಮತ್ತು ಪ್ರಿಸರ್ವೇಟಿವ್ಸ್ ಬಳಸಲಾಗುತ್ತಿದೆ. ಇಂತಹ ಉತ್ಪನ್ನಗಳಿಗೆ ‘FSSAI’ ಹೇಗೆ ಅನುಮೋದನೆ ನೀಡಿದೆ ಎಂದು ವೈದ್ಯೆ ಪ್ರಶ್ನಿಸಿದ್ದರು.
ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ವೈದ್ಯೆಯ ವಿರುದ್ಧ ಕೆಎಂಎಫ್ (KMF) ಸಂಸ್ಥೆಯು ದೂರು ದಾಖಲಿಸಿತ್ತು.
ಕೆಎಂಎಫ್ ನೀಡಿದ ಖಡಕ್ ಸ್ಪಷ್ಟನೆ ಏನು?
ವೈದ್ಯೆಯ ವಿಡಿಯೋದಿಂದ ಗ್ರಾಹಕರು ಗೊಂದಲಕ್ಕೊಳಗಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕರ್ನಾಟಕ ಹಾಲು ಮಹಾಮಂಡಳ (KMF), “ನಂದಿನಿ ಉತ್ಪನ್ನಗಳ ಮೇಲಿನ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ನಮ್ಮ ಸಂಸ್ಥೆಯು ಕೇಂದ್ರ ಸರ್ಕಾರದ ಆಹಾರ ಸುರಕ್ಷತಾ ನಿಯಮಗಳು (FSSAI) ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ನಂದಿನಿಯ ಎಲ್ಲಾ ಹಾಲು ಮತ್ತು ಹಾಲಿನ ಉತ್ಪನ್ನಗಳು 100% ಸುರಕ್ಷಿತವಾಗಿದ್ದು, ಗ್ರಾಹಕರು ಇಂತಹ ವದಂತಿಗಳನ್ನು ನಂಬಬಾರದು” ಎಂದು ಪ್ರಕಟಣೆ ಹೊರಡಿಸಿತ್ತು.