ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲಿನ ಕೈದಿಗಳ ಜೊತೆ ಸೇರಿ ಯೋಗ ಮಾಡುತ್ತಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಇಂದು (ಜೂನ್ 21) ‘ಅಂತಾರಾಷ್ಟ್ರೀಯ ಯೋಗ ದಿನಾಚರಣೆ’ ಪ್ರಯುಕ್ತ ಜೈಲು ಅಧಿಕಾರಿಗಳು ಕೈದಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಯೋಗ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಹಲವು ಕೈದಿಗಳು ಭಾಗವಹಿಸಿ ವಿವಿಧ ಆಸನಗಳನ್ನು ಅಭ್ಯಾಸ ಮಾಡಿದ್ದಾರೆ. ಜೈಲಿನ ಕಾರಿಡಾರ್ ನಲ್ಲಿ ದರ್ಶನ್ ಅವರು ಸಹ-ಕೈದಿಗಳೊಂದಿಗೆ ಯೋಗ ನಿರತರಾಗಿರುವ ಚಿತ್ರಗಳು ಹೊರಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಮೂಲಗಳ ಪ್ರಕಾರ, ಆರಂಭದಲ್ಲಿ ನಟ ದರ್ಶನ್ ಅವರು ತಮಗಿರುವ ತೀವ್ರ ಬೆನ್ನುನೋವಿನ ಕಾರಣದಿಂದಾಗಿ ಯೋಗ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಆದರೆ, ಅಲ್ಲಿಗೆ ಭೇಟಿ ನೀಡಿದ್ದ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು “ಯೋಗ ಮಾಡುವುದರಿಂದ ಬೆನ್ನುನೋವು ನಿಯಂತ್ರಣಕ್ಕೆ ಬರುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ” ಎಂದು ಮನವರಿಕೆ ಮಾಡಿಕೊಟ್ಟ ನಂತರ ದರ್ಶನ್ ಅವರು ಇತರ ಕೈದಿಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.
ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಇತ್ತೀಚಿನ ಸ್ಥಿತಿಯನ್ನು ನೋಡಲು ಕಾಯುತ್ತಿದ್ದ ಅವರ ಅಭಿಮಾನಿಗಳು ಯೋಗ ದಿನಾಚರಣೆಯ ಫೋಟೋ ಕಂಡು ಸಂಭ್ರಮಿಸಿದ್ದಾರೆ.