ದೇಶದ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ ಯೋಜನೆ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಐತಿಹಾಸಿಕ ತೀರ್ಪೊಂದರಲ್ಲಿ, “ರಸ್ತೆ ಪಕ್ಕದ ಫುಟ್ಪಾತ್ಗಳಲ್ಲಿ (ಪಾದಚಾರಿ ಮಾರ್ಗ) ಮುಕ್ತವಾಗಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು” ಎಂದು ಸುಪ್ರೀಂ ಕೋರ್ಟ್ ಮಹತ್ವದ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೆ, ರಸ್ತೆಗಳಲ್ಲಿ ಮೋಟಾರು ವಾಹನಗಳ ಸಂಚಾರಕ್ಕಿಂತ ಪಾದಚಾರಿಗಳ ಸುರಕ್ಷಿತ ನಡಿಗೆಗೇ ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಸಂವಿಧಾನದ ಅಡಿಯಲ್ಲಿ ಬದುಕುವ ಹಕ್ಕು!
ಸಂವಿಧಾನದ ವಿಧಿ 19(1)(d) (ಮುಕ್ತವಾಗಿ ಸಂಚರಿಸುವ ಹಕ್ಕು) ಮತ್ತು ವಿಧಿ 21 (ಜೀವಿಸುವ ಹಕ್ಕು) ಅಡಿಯಲ್ಲಿ ಫುಟ್ಪಾತ್ನಲ್ಲಿ ನಡೆಯುವ ಹಕ್ಕು ನಾಗರಿಕರಿಗೆ ಲಭ್ಯವಿದೆ ಎಂದು ಕೋರ್ಟ್ ಹೇಳಿದೆ.
“ಒಂದು ರಸ್ತೆ ಇದೆ ಎಂದಾದಲ್ಲಿ, ಅಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸುವುದು, ಅದನ್ನು ಸೂಕ್ತವಾಗಿ ನಿರ್ವಹಿಸುವುದು ಮತ್ತು ರಕ್ಷಿಸುವುದು ಆಯಾ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಪುರಸಭೆ ಹಾಗೂ ಗ್ರಾಮ ಪಂಚಾಯತ್ಗಳ ಕರ್ತವ್ಯವಾಗಿರುತ್ತದೆ. ಈ ಹಕ್ಕಿನ ಉಲ್ಲಂಘನೆಯಾದರೆ ನಾಗರಿಕರು ನೇರವಾಗಿ ಪರಿಹಾರ ಅಥವಾ ನಷ್ಟ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಬಹುದು,” ಎಂದು ಪೀಠವು ಎಚ್ಚರಿಸಿದೆ.
ತೀರ್ಪಿಗೆ ಕಾರಣವಾದ ಆ ಒಂದು ದುರಂತ ಘಟನೆ:
ಮಣಿಯಾರ್ ಇಲಿಯಾಸ್ (ಶೇಖ್ ರಿಯಾಜ್) ಎಂಬುವವರು ಸಲ್ಲಿಸಿದ್ದ ಸಿವಿಲ್ ಮೇಲ್ಮನವಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಶೇಖ್ ರಿಯಾಜ್ ಅವರು ತಮ್ಮ 5 ವರ್ಷದ ಪುಟ್ಟ ಮಗನನ್ನು ಬೆಳಗ್ಗೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ವೇಗದ ಟ್ಯಾಂಕರ್ ಲಾರಿಯೊಂದು ಮಗುವಿನ ಮೇಲೆ ಹರಿದು ಮಗು ಸ್ಥಳದಲ್ಲೇ ಮೃತಪಟ್ಟಿತ್ತು.
ಈ ದುರಂತವನ್ನು ಉಲ್ಲೇಖಿಸಿದ ಕೋರ್ಟ್, “ನಮ್ಮ ರಸ್ತೆ ಯೋಜನೆಗಳು ಕೇವಲ ವಾಹನಗಳ ಚಲನೆಯನ್ನೇ ಗಮನದಲ್ಲಿಟ್ಟುಕೊಂಡು ರೂಪಿತವಾಗುತ್ತಿರುವುದರಿಂದ ಪಾದಚಾರಿಗಳ ಹಕ್ಕುಗಳು ಹತ್ತಿಕ್ಕಲ್ಪಡುತ್ತಿವೆ. ಚಕ್ರಗಳ ಅಬ್ಬರದಲ್ಲಿ ನಮ್ಮ ಯೋಜನೆಗಳು ಕುರುಡಾಗಿವೆ,” ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಮೃತ ಮಗುವಿನ ತಂದೆಗೆ 11,44,628 ರೂ.ಗಳ ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸುವಂತೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ನ ಪ್ರಮುಖ ನಿರ್ದೇಶನಗಳು:
ವಿಶೇಷ ನಿಯಂತ್ರಣ ಮಂಡಳಿ: ಪಾದಚಾರಿಗಳ ಹಕ್ಕನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಪ್ರತ್ಯೇಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಲು ಕೋರ್ಟ್ ಕರೆ ನೀಡಿದೆ.
ಕೇಂದ್ರ ಸರ್ಕಾರಕ್ಕೆ ನೋಟಿಸ್: ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಸಂವಿಧಾನದ ವಿಧಿ 32ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿದ್ದು, ಕೇಂದ್ರ ಸರ್ಕಾರವನ್ನು ಇದರಲ್ಲಿ ಪ್ರತಿವಾದಿಯನ್ನಾಗಿ ಮಾಡಿದೆ.
ಕಾನೂನು ಚೌಕಟ್ಟು: ಈ ತೀರ್ಪಿನ ಪ್ರತಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ರಸ್ತೆ ಸಾರಿಗೆ ಸಚಿವಾಲಯ ಹಾಗೂ ಕಾನೂನು ಆಯೋಗಕ್ಕೆ ಕಳುಹಿಸಿ ಸೂಕ್ತ ಕಾನೂನು ಚೌಕಟ್ಟು ರೂಪಿಸಲು ಸೂಚಿಸಲಾಗಿದೆ.
ನಗರಾಭಿವೃದ್ಧಿ ಯೋಜನೆಗಳಲ್ಲಿ ಇನ್ಮುಂದೆ ಪಾದಚಾರಿ ಮಾರ್ಗಗಳ ನಿರ್ಮಾಣವನ್ನು ಕಡ್ಡಾಯಗೊಳಿಸುವಂತೆ ಸ್ಥಳೀಯ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಈ ತೀರ್ಪು ದಾರಿದೀಪವಾಗಲಿದೆ.