ಶಿವಮೊಗ್ಗ : ಸಮಾಜ ಕಲ್ಯಾಣ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ನಕಲಿ ಪತ್ರಗಳ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಶಿವಕುಮಾರ ಸ್ವಾಮಿ ಬಡಾವಣೆಯ ನಿವಾಸಿಯಾದ ಅಮೃತ್ ಜಿ. ಎಂಬ ವ್ಯಕ್ತಿಯು ಸಮಾಜ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿದ್ದಾನೆ. ಅದರಲ್ಲಿ ‘ದೇವರಾಜ ಅರಸು ಸಾಲ ಮಂಜೂರಾತಿ’ ಎಂಬ ಪದವನ್ನು ಮುದ್ರಿಸಿ, ಸುಮಾರು 150 ಕ್ಕಿಂತಲೂ ಹೆಚ್ಚು ಕೂಲಿ ಕಾರ್ಮಿಕರಿಂದ ಹಣವನ್ನು ಪಡೆದು ವಂಚಿಸಿರುವುದು ತಿಳಿದುಬಂದಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೆಸರನ್ನು ಬಳಸಿಕೊಂಡು ಸಾಲ ಮಂಜೂರು ಮಾಡಿಸಿಕೊಡುವುದಾಗಿ ಅಥವಾ ಸಾಲ ಮಂಜೂರು ಮಾಡಿಸಲು ಹಣದ ಆಮಿಷ ಒಡ್ಡಿ ಈ ವ್ಯಕ್ತಿ ವಂಚನೆಗೆ ಯತ್ನಿಸುತ್ತಿದ್ದಾನೆ. ಆದ್ದರಿಂದ ಸಾರ್ವಜನಿಕರು ಯಾರೂ ಕೂಡ ಈತನಿಗೆ ಹಣವನ್ನು ನೀಡಬಾರದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸದರಿ ವ್ಯಕ್ತಿಯೊಂದಿಗೆ ನಿಗಮವು ಯಾವುದೇ ಯೋಜನೆಯ ಬಗ್ಗೆ ಪತ್ರ ವ್ಯವಹಾರಗಳನ್ನು ಮಾಡಿಲ್ಲ. ಹಾಗೂ ಈ ವ್ಯಕ್ತಿಗೂ ನಮ್ಮ ನಿಗಮಕ್ಕೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಜಿಲ್ಲಾ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗರೂಕರಾಗಿರಬೇಕು ಎಂದು ವಿನಂತಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ-ಸಹಾಯ ಯೋಜನೆಗೆ ಅರ್ಜಿ ಆಹ್ವಾನ
ಶಿವಮೊಗ್ಗ ‘ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026-27 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ/ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಹಾಗೂ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ವೆಬ್ಸೈಟ್ https://ssp.postmatric.karnataka.gov.in ಮೂಲಕ ದಿ: 31/08/2026 ರೊಳಗಾಗಿ ಸಲ್ಲಿಸಬೇಕು. ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ https://bcwd.karnataka.gov.in ವೆಬ್ಸೈಟ್ಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ: 8050770004, ಇ-ಮೇಲ್ [email protected] ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇ-ಮೇಲ್ [email protected] ಅಥವಾ ದೂ.ಸಂ: 1902 ಗೆ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.