ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಮನೆಯ ಆವರಣಕ್ಕೆ ವಿಷಪೂರಿತ ಹಾವನ್ನು ಬಿಟ್ಟು ಯುವತಿ ಕೊಲೆ ಯತ್ನಕ್ಕೆ ಯತ್ನಿಸಿದ ಇಬ್ಬರನ್ನು ಬಂಧಿಸಲಾಗಿದೆ,
ಯುವತಿ ಮನೆಯಲ್ಲಿದ್ದಾಗ ಇಬ್ಬರು ಅಪರಿಚಿತ ಯುವಕರು ವಿಷಪೂರಿತ ಹಾವನ್ನು ಮನೆಯ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ. ಭದ್ರಾವತಿಯ ನ್ಯೂ ಕಾಲೋನಿ ನಿವಾಸಿಗಳಾದ ಕಿಶೋರ್ ಮತ್ತು ಜಯಂತ್ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ನ್ಯೂಟೌನ್ ಪೊಲೀಸರು ಬಲೆ ಬೀಸಿದ್ದಾರೆ.
ಕಾರ್ಪೊರೇಟ್ ಕಂಪನಿ ಉದ್ಯೋಗಿಯಾಗಿರುವ ಯುವತಿ ಭದ್ರಾವತಿ ಜನ್ನಾಪುರದ ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ ಇಬ್ಬರು ಮುಸುಕುಧಾರಿಗಳು ಮನೆಯ ಕಾಂಪೌಂಡ್ ಒಳಗೆ ಪ್ರವೇಶಿಸುವುದನ್ನು ಕಿಟಕಿ ಮೂಲಕ ಗಮನಿಸಿದ್ದಾರೆ. ಕಾಂಪೌಂಡ್ ಒಳಗೆ ಹಾವು ಬಿಟ್ಟಿರುವುದನ್ನು ನೋಡಿ ಕಿರುಚಾಡಿದ್ದಾರೆ. ಈ ವೇಳೆ ಮುಸುಕು ದಾರಿಗಳು ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಅಕ್ಕಪಕ್ಕದವರು ಯುವತಿ ನೆರವಿಗೆ ಧಾವಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿದ ಪೊಲೀಸರು ಇಬ್ಬರನ್ನು ಮಂಗಳವಾರ ಬಂದಿಸಿದ್ದಾರೆ. ಪ್ರೀತಿ ನಿರಾಕರಿಸಿದರಿಂದ ಕೋಪಗೊಂಡಿದ್ದ ಆರೋಪಿ ಯುವತಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ಸ್ನೇಹಿತರಿಗೆ ಆಕೆಯ ಮನೆಯ ಕಾಂಪೌಂಡ್ ಒಳಗೆ ಹಾವು ಬಿಡುವಂತೆ ಹೇಳಿದ್ದ ಎನ್ನಲಾಗಿದೆ.
ಯುವಕರು ಚೀಲದಲ್ಲಿ ತಂದಿದ್ದ ದೊಡ್ಡ ವಿಷಕಾರಿ ಹಾವನ್ನು ಮನೆಯ ಆವರಣದೊಳಗೆ ಬಿಟ್ಟು ಹೋಗಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೊಲ್ಲುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಪೋಷಕರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.