ಬೆಂಗಳೂರು: ಇತ್ತೀಚೆಗೆ ಆರಂಭವಾಗಿ, ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ ಸಾರ್ವಜನಿಕರಿಂದ ಮಾತ್ರವಲ್ಲ ಸೆಲೆಬ್ರಿಟಿಗಳು, ಪ್ರಮುಖ ನಾಯಕರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸಿದ್ದಾರೆ. ಆದರೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪವನ್ ಕಲ್ಯಾಣ್ ಈ ಚಳವಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಸಂಘಟನೆ ಮತ್ತು ಇದನ್ನು ಬೆಂಬಲಿಸುವವರು ದೇಶವನ್ನು ಒಡೆಯುವ ಮತ್ತು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಪ್ರಕಾಶ್ ರಾಜ್ ಅವರು ಕಾಕ್ರೋಚ್ ಜನತಾ ಪಾರ್ಟಿ ಯನ್ನು ಬೆಂಬಲಿಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ (JSP) ಸಭೆಯಲ್ಲಿ ಮಾತನಾಡಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಇತ್ತೀಚೆಗೆ ನೀವು ಈ ಜಿರಳೆಗಳ (ಕಾಕ್ರೋಚ್) ಬಗ್ಗೆ ಕೇಳಿರಬಹುದು. ಒಂದು ಸಣ್ಣ ಇರುವೆ ಕೂಡ ದೊಡ್ಡ ಹಾವನ್ನು ಕೊಲ್ಲಬಲ್ಲದು ಎಂದಿದ್ದಾರೆ.
ದೇಶದ ರಾಜಕಾರಣದ ಆಳ ಗೊತ್ತಿಲ್ಲದ ಕೆಲವು ಸಂಕುಚಿತ ಮನಸ್ಸಿನ ಜನರು, ದೇಶವನ್ನು ಒಡೆಯುವ ಆಲೋಚನೆಗಳ ಮೂಲಕ ಭಾರತದ ಸಮಗ್ರತೆಯನ್ನು ಹಾಳು ಮಾಡಲು ನೋಡುತ್ತಿದ್ದಾರೆ. ನಾವು ಇಂತಹ ಆಲೋಚನೆಗಳಿಗೆ ಬಲಿಯಾಗಬಾರದು. ಸಣ್ಣ ಬುದ್ಧಿಯ ಕೋಟ್ಯಂತರ ಜನರು ಒಂದಾದರೆ ಅದರ ಪ್ರಭಾವ ದೊಡ್ಡದಾಗಿರುತ್ತದೆ, ಅದು ಒಳ್ಳೆಯದಕ್ಕಾದರೂ ಆಗಬಹುದು ಅಥವಾ ಕೆಟ್ಟದ್ದಕ್ಕಾದರೂ ಆಗಬಹುದು. ಹಾಗಾಗಿ ನಾವು ಇದರ ವಿರುದ್ಧ ಹೋರಾಡಬೇಕೇ ಹೊರತು, ಇದರಲ್ಲಿ ಭಾಗಿಯಾಗಬಾರದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಸುದ್ದಿಸಂಸ್ಥೆ ಎಎನ್ಐ’ ಜೊತೆ ಮಾತನಾಡಿದ್ದ ಅವರು, ಅವರಿಗೆ ಯಾಕೆ ಇಷ್ಟೊಂದು ಕೋಪ ಇದೆಯೋ ಗೊತ್ತಿಲ್ಲ. ಜಿರಳೆಗಳು ಯಾವಾಗಲೂ ಚರಂಡಿಯಲ್ಲೇ ಇರುತ್ತವೆ. ಅಂದರೆ ಬಹುಶಃ ಅವರ ನೋವು ಏನೆಂದು ನನಗೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದ್ದರು.
ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಕಾಶ್ ರಾಜ್, ಪ್ರತಿಭಟನೆ ಮಾಡುವವರನ್ನು ನೀವು ಪಾಕಿಸ್ತಾನಿಗಳು ಎಂದರೂ ನಮಗೆ ಭಯವಿಲ್ಲ, ಭಯೋತ್ಪಾದಕರು ಎಂದರೂ ಹೆದರುವುದಿಲ್ಲ, ಜಿರಳೆಗಳು (ಕಾಕ್ರೋಚ್) ಎಂದು ಕರೆದರೂ ನಾವು ಭಯ ವಿಚಲಿರತಾಗುವುದಿಲ್ಲ. ಜನರಿಂದ ಆಯ್ಕೆಯಾದ ನಾಯಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ನೀವು ರಾಜಕೀಯ ಮಾಡುವುದನ್ನು ಬಿಟ್ಟು ನಮಗೆ ಕೆಲಸ ಕೊಡಿ. ಈ ದೇಶದ ಯುವಕರು ತಮ್ಮ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದ್ದಾರೆ ಎಂದು ಗುಡುಗಿದ್ದಾರೆ.