ಕಲಬುರಗಿ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಸಹಕರಿಸಲು ವಿಶೇಷ ಸರ್ಕಾರಿ ಅಭಿಯೋಜಕರಿಗೆ ಲಂಚ ನೀಡಲು ಯತ್ನಿಸಿದ ತಂದೆ ಹಾಗೂ ಮಗನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿ ಜಿಲ್ಲಾ ಕೋರ್ಟ್ ಸಂಕೀರ್ಣದ ಕಟ್ಟಡದಲ್ಲಿ ಸೋಮವಾರ ಘಟನೆ ನಡೆದಿದೆ. 5,000 ರೂ. ಲಂಚ ನೀಡಲು ಯತ್ನಿಸಿದ ಆಳಂದ ತಾಲೂಕಿನ ಕೊತನಹಿಪ್ಪರಗಾದ ಸಂಜೀವನ್ ದತ್ತಾಜಿ ಪಾಟೀಲ(80), ಅವರ ಪುತ್ರ ಸುರೇಶ್ ಸಂಜೀವನ್ ಪಾಟೀಲ(44) ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣದ ವಿಚಾರಣೆ ಕಲಬುರಗಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಈ ಪ್ರಕರಣದಲ್ಲಿ ಆರೋಪಿಯಾದ ತಮ್ಮನಿಗೆ ಸಹಕರಿಸುವಂತೆ ಅಣ್ಣ ಸಂಜೀವನ್ ಪಾಟೀಲ್ ಅವರು ತಮ್ಮ ಮಗ ಸುರೇಶ್ ಜೊತೆಗೆ 5000 ರೂ. ಹಣವನ್ನು ಕವರ್ ನಲ್ಲಿ ಇಟ್ಟು ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೀಡಲು ಮುಂದಾಗಿದ್ದರು.
ಕಲಬುರಗಿ ವಿಭಾಗದ ವಿಶೇಷ ಸರ್ಕಾರಿ ಅಭಿಯೋಜಕ(SPP) ಪ್ರಾಣೇಶ ಭರತನೂರ ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಇನ್ ಸ್ಪೆಕ್ಟರ್ ಗಳಾದ ರಾಜಶೇಖರ ಬಡದೇಸಾರ, ಅರುಣಕುಮಾರ್ ಕಾರ್ಯಾಚರಣೆ ನಡೆಸಿ ಲಂಚ ಕೊಡಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.