ಬಳ್ಳಾರಿ: ಮೇಲ್ಸೇತುವೆ ಹಾಗೂ ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದನ್ನು ಪ್ರಶ್ನೆ ಮಾಡಿದ ಸ್ಥಳೀಯರನ್ನೇ ಬಳ್ಳಾರಿ ಕಾಂಗ್ರೆಸ್ ಸಂಸದ ಇ.ತುಕಾರಾಂ ಅಶ್ಲೀಲವಾಗಿ ನಿಂದಿಸಿರುವ ಘಟನೆ ನಡೆದಿದೆ.
ಹೊಸಪೇಟೆ ಬಳಿ ಕುಸಿದ ಸರ್ವಿಸ್ ರಸ್ತೆ ವೀಕ್ಷಿಸಲು ತೆರಳಿದ್ದಾಗ, ಕಾಮಗಾರಿ ಬಗ್ಗೆ ಪ್ರಶ್ನೆ ಎತ್ತಿದ ಕೆಲವರನ್ನು ಗುರುಯಾಗಿಸಿ ಸಂಸದರು ಕೆಟ್ಟ ಪದ ಬಳಸಿದ್ದಾರೆ. ನಿಂದನೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿರ್ಮಾಣಗೊಂಡ ಕೆಲವೇ ದಿನದಲ್ಲೇ ಸರ್ವಿಸ್ ರಸ್ತೆ ಕುಸಿದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಇ. ತುಕಾರಾಂ ಸ್ಥಳೀಯ ನಿವಾಸಿಗಳ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಕಳಪೆ ಕಾಮಗಾರಿ ಬಗ್ಗೆ ಸಂಸದರನ್ನು ಸ್ಥಳೀಯರು ಪ್ರಶ್ನೆ ಮಾಡಿದ ವೇಳೆ ತುಕಾರಾಂ ಗರಂ ಆಗಿದ್ದು, ಅವಾಚ್ಯವಾಗಿ ನಿಂದಿಸಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಮೇಲ್ಸೆತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದೆ ಟ್ರಕ್ ನಿಂತಿದ್ದಾಗ ಸರ್ವಿಸ್ ರಸ್ತೆ ಕುಸಿದುಬಿದ್ದಿತ್ತು. ರಸ್ತೆ ನಿರ್ಮಾಣಗೊಂಡು ಕೇವಲ 10 ದಿನಗಳಲ್ಲಿಯೇ ಘಟನೆ ನಡೆದಿದ್ದ ಕಾರಣ ಕಳಪೆ ಕಾಮಗಾರಿಯಿಂದಲೇ ಈರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. 2 ತಿಂಗಳ ಹಿಂದೆಯಷ್ಟೇ ಕಾಮಗಾರಿಗೆ ಸಂಸದ ತುಕಾರಾಂ ಭೂಮಿ ಪೂಜೆ ನೆರವೇರಿಸಿದ್ದು, 33 ಕೋಟಿ ವೆಚ್ಚದಲ್ಲಿ ಮೆಲ್ಸೇತುವೆ, ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಹಣ ಉಳಿಸಲು ರಸ್ತೆ ನಿರ್ಮಾಣದ ವೇಳೆ ಮಣ್ಣು ಹಾಕದೇ ಪ್ಲೈಯಶ್ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗಾಗಿಯೇ ರಸ್ತೆ ನಿರ್ಮಿಸಿ ಕೆಲ ದಿನಗಳು ಕಳೆಯುವುದರ ಒಳಗೆ ಅದು ಕುಸಿಯುತ್ತಿದೆ. ಜನರ ಹಣವನ್ನು ಈ ರೀತಿ ದುರ್ಬಳಕ್ಕೆ ಮಾಡುತ್ತಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.