ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಜಿಲ್ಲೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರಿಗೆ ಹಾಗೂ ನೇಕಾರಿಕೆಗೆ ಸಂಬಂಧಿಸಿದ ಇತರ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರಿಗೆ 2026-27ನೇ ಸಾಲಿನ ‘ನೇಕಾರ ಸಮ್ಮಾನ್ ಯೋಜನೆ’ಯಡಿ ವಾರ್ಷಿಕ ₹5,000 ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಜುಲೈ 20 ಅರ್ಜಿ ಸಲ್ಲಿಸಲು ಕೊನೆಯ ದಿನ.
2025-26ನೇ ಸಾಲಿನಲ್ಲಿ ಈ ಯೋಜನೆಯಡಿ ಸೌಲಭ್ಯ ಪಡೆದಿರುವ ನೇಕಾರರ ಪಟ್ಟಿಯಲ್ಲಿ, ಪ್ರಸ್ತುತ ಸಾಲಿನಲ್ಲಿ ಮೃತರಾಗಿರುವ, ನೇಕಾರಿಕೆ ವೃತ್ತಿ ಬಿಟ್ಟಿರುವ ಮತ್ತು ಬೇರೆ ಕಡೆ ಸ್ಥಳಾಂತರಗೊಂಡಿರುವ ನೇಕಾರರನ್ನು ಹೊರತುಪಡಿಸಿ, ಪ್ರಸ್ತುತ ನೇಕಾರಿಕೆ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ PMJJBY/PMSBY ಅಡಿಯಲ್ಲಿ ಕಡ್ಡಾಯವಾಗಿ ನೊಂದಾಯಿಸಿಕೊಂಡಿರುವ ಅರ್ಹ ನೇಕಾರರು ಇದಕ್ಕೆ ಅರ್ಹರಾಗಿರುತ್ತಾರೆ. ಕಳೆದ ಸಾಲಿನಲ್ಲಿ ನೋಂದಣಿಯಾಗದೆ ಇರುವ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಹೊಸದಾಗಿ ಅರ್ಜಿ ಸಲ್ಲಿಸಲು ಸಹ ಅವಕಾಶ ಕಲ್ಪಿಸಲಾಗಿದೆ.
ಹೊಸದಾಗಿ ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿ ನಮೂನೆಯೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ ಸಮ್ಮಾನ್ ಐ.ಡಿ. ಅಥವಾ ಪೆಹಚಾನ್ ಕಾರ್ಡ್, ಆಧಾರ್ ಲಿಂಕ್ಡ್ ಬ್ಯಾಂಕ್ ಪಾಸ್ ಬುಕ್, ನೇಕಾರರ ಗುರುತಿನ ಚೀಟಿ, ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ಫೋಟೋ ಪ್ರತಿ ಹಾಗೂ PMJJBY/PMSBY ಅಡಿ ನೋಂದಣಿಯಾಗಿರುವ ಕುರಿತು ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ನವೀಕರಣದ ಪ್ರತಿಯನ್ನು ಸಲ್ಲಿಸಬೇಕಿರುತ್ತದೆ.
ಅರ್ಹ ನೇಕಾರರು ತಮ್ಮ ವಿವರಗಳನ್ನು ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮ ಅಥವಾ ನೇಕಾರ ಸಹಕಾರ ಸಂಘಗಳ ಮೂಲಕ ಸಲ್ಲಿಸಬಹುದು. ಇಲ್ಲವೇ ನೇರವಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಿ.ಡಿ. ರಸ್ತೆ, ಯೂನಿಯನ್ ಪಾರ್ಕ್ ಹತ್ತಿರ, ಮಸೀದಿ ಪಕ್ಕ, ಚಿತ್ರದುರ್ಗ ಕಚೇರಿಗೆ ದಿನಾಂಕ: 20-07-2026 ರೊಳಗಾಗಿ ಸಲ್ಲಿಸಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-221426 ಗೆ ಸಂಪರ್ಕಿಸಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.