ಬೆಂಗಳೂರು: ಕೆಎಂಎಫ್ ಪಶು ಆಹಾರ ಘಟಕದಲ್ಲಿ ನಡೆದಿದೆ ಎನ್ನಲಾದ ಕಲಬೆರಕೆ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕೆಎಂಎಫ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣ ಸಂಬಂಧ ಕೆಎಂಎಫ್ನ ಪಶು ಆಹಾರ ಘಟಕ ನಿರ್ದೇಶಕ ಜೆ.ಜಯಕುಮಾರ್, ಪಶು ಆಹಾರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಸಿ.ಮಲ್ಲಿಕಾರ್ಜುನ, ಪಶು ಆಹಾರ ಘಟಕದ ಹಿರಿಯ ಉಪ ನಿರ್ದೇಶಕ ಜಿ.ಎಸ್.ನಾಗೇಶ್ ಮತ್ತು ಪಶು ಆಹಾರ ಘಟಕದ ಉಪ ನಿರ್ದೇಶಕ ಸೋಮನಾಥ ಅವರನ್ನು ಅಮಾನತು ಮಾಡಿ ಕೆಎಂಎಫ್ ಎಂಡಿ ಡಾ.ಎಸ್.ಟಿ.ಸುರೇಶ್ ಆದೇಶಿಸಿದ್ದಾರೆ.
ಬೆಂಗಳೂರಿನ ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಡಿಮೆ ಟಿಆರ್ಎಸ್ ಇರುವಂತಹ ಕಳಪೆ ಗುಣಮಟ್ಟದ ಮೊಲಾಸಿಸ್ ಬಳಸಿ ಪಶು ಆಹಾರ ತಯಾರಿಸಲಾಗುತ್ತಿತ್ತು. ಈ ಕಳಪೆ ಆಹಾರದಿಂದಾಗಿ ಈಗಾಗಲೇ ಸಾವಿರಾರು ಹಸುಗಳು ಸಾವನ್ನಪ್ಪಿವೆ ಹಾಗೂ ಸಂತಾನೋತ್ಪತ್ತಿಯಲ್ಲೂ ಸಮಸ್ಯೆಗಳು ಎದುರಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.